ದಿನೇಶ್ವರ್ ಗುಪ್ತಚರ ದಳದ ನಿರ್ದೇಶಕ
ನವದೆಹಲಿ(ಐಎಎನ್ಎಸ್): ಕೇಂದ್ರ ಗುಪ್ತಚರ ದಳದ (ಐಬಿ) ನೂತನ ನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ದಿನೇಶ್ವರ್ ಶರ್ಮಾ ಅವರನ್ನು ನೇಮಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ. ಈ ಹಿಂದೆ ಗುಪ್ತಚರ ದಳದ ವಿಶೇಷ ನಿರ್ದೇಶಕ ಮತ್ತು ವಿಶೇಷ ಕರ್ತವ್ಯಗಳ ಮೇಲಿನ ಅಧಿಕಾರಿಯಾಗಿದ್ದ ಶರ್ಮಾ ಅವರನ್ನು ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಹೊಸ ಐಬಿ ಮುಖ್ಯಸ್ಥರನ್ನಾಗಿ ನೇಮಿಸಿದೆ.
ಆಮಿಷವೊಡ್ಡಿ ಮತಾಂತರ: ಆರೋಪ
ಲಖನೌ (ಪಿಟಿಐ): ವಿಶ್ವಹಿಂದೂ ಪರಿಷತ್ ಮತ್ತು ಹಿಂದೂಪರ ಸಂಘಟನೆಗಳು ಬಡ ಮುಸ್ಲಿಮರಿಗೆ ಆಮಿಷಗಳನ್ನು ಒಡ್ಡಿ ಅವರನ್ನು ಮತಾಂತರಕ್ಕೆ ಪ್ರಚೋದಿಸುತ್ತಿವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಆರೋಪ ಮಾಡಿದೆ.
ಧರ್ಮದ ಆಧಾರದಲ್ಲಿ ಜನರ ಧ್ರುವೀಕರಣ ಮಾಡುವ ಇಂತಹ ಘಟನೆಗಳನ್ನು ಪತ್ತೆ ಮಾಡಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಮಂಡಳಿ, ಸ್ಥಿತಿವಂತ ಮುಸ್ಲಿಮರು ಒಂದುಗೂಡಿ ಬಡ ಮುಸ್ಲಿಮರನ್ನು ತಮ್ಮ ಸಹೋದರರೆಂದು ತಿಳಿದುಕೊಂಡು ಅವರಿಗೆ ನೆರವಿನ ಹಸ್ತಚಾಚಬೇಕು ಎಂದಿದೆ.
ನಕ್ಸಲರಿಗೆ ದಿಗ್ವಿಜಯ್ ಕರೆ
ಪಣಜಿ(ಪಿಟಿಐ): ‘ಹಿಂಸೆಯ ಮಾರ್ಗ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿ’ ಎಂದು ಕಾಂಗ್ರೆಸ್ನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನಕ್ಸಲರಿಗೆ ಕರೆ ನೀಡಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ‘ಚಿಂತನಾ ಶಿಬಿರ’ದಲ್ಲಿ ಮಾತನಾಡಿದ ದಿಗ್ವಿಜಯ್ ‘ನೇಪಾಳದ ಮಾವೊವಾದಿಗಳು ಹಿಂಸಾ ಮಾರ್ಗ ಬಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವ ರೀತಿ, ನಕ್ಸಲರು ತಮ್ಮನ್ನು ತಾವು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು’ ಎಂದಿದ್ದಾರೆ.
ವ್ಯಾನ್ ಗುದ್ದಿ ಪೊಲೀಸರು ಸಾವು
ನವದೆಹಲಿ: ವಾಹನ ನಿಲ್ಲಿಸಲು ಸೂಚಿಸಿದ ಪೊಲೀಸ್ ಸಿಬ್ಬಂದಿಗೆ ಕಾಲ್ಸೆಂಟರ್ ವ್ಯಾನ್ ಗುದ್ದಿಸಿದ್ದರಿಂದ ಇಬ್ಬರು ಪೊಲೀಸರು ಮೃತಪಟ್ಟ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ. ದೆಹಲಿಯ ಕಾಲಿಂದಿ ಕುಂಜ್ ಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿ 12.45ರಲ್ಲಿ ಈ ಘಟನೆ ನಡೆದಿದೆ.
ಜರ್ಮನಿ ಮಹಿಳೆಗೆ ಕಿರುಕುಳ: ಬಂಧನ
ಪಣಜಿ(ಪಿಟಿಐ): 22 ವರ್ಷದ ಜರ್ಮನಿ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಟೊರಿಕ್ಷಾ ಚಾಲಕ ಚೇತನ್ ನಂಶಿಕರ್ನನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಿಗಳಿಗೆ 10 ವರ್ಷ ಜೈಲು ಶಿಕ್ಷೆ
ನವದೆಹಲಿ (ಪಿಟಿಐ): 15 ವರ್ಷದ ಬಾಲಕಿಯನ್ನು ಅಪಹರಿಸಿ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದ ಮೂವರಿಗೆ ಇಲ್ಲಿನ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹಳಿ ತಪ್ಪಿದ ರೈಲು
ಕೋಲ್ಕತ್ತ (ಪಿಟಿಐ): ಹೌರಾ- ನವದೆಹಲಿ ಪೂರ್ವ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಭಾನುವಾರ ಬೆಳಿಗ್ಗೆ ಹಳಿ ತಪ್ಪಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಹೌರಾ ನಿಲ್ದಾಣದಿಂದ ಬೆಳಿಗ್ಗೆ 8.15 ಹೊರಟ ರೈಲು, 8.27ಕ್ಕೆ ಲಿಲುವಾ ನಿಲ್ದಾಣ ಪ್ರವೇಶಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರೈಲು ಬಹಳ ನಿಧಾನಗತಿಯಲ್ಲಿ ಚಲಿಸುತ್ತಿದ್ದುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.