ಮುಂಬೈ (ಪಿಟಿಐ): ವಾಣಿಜ್ಯ ನಗರಿಯಲ್ಲಿ ೧೯೯೩ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಕಾರಾಗೃಹದ ಅಧಿಕಾರಿಗಳು ಪದೇಪದೇ ಗೈರುಹಾಜರಿ ರಜೆ ನೀಡುತ್ತಿರುವುದನ್ನು ತನಿಖೆಗೆ ಒಳಪಡಿಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.
‘ಗೈರುಹಾಜರಿ ರಜೆಗೆ ನಾಲ್ಕೈದು ಕೈದಿಗಳು ಮನವಿ ಮಾಡಿದ್ದರೂ ದತ್ಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಮಾಹಿತಿ ನನಗೆ ಬಂದಿದೆ. ಗೈರುಹಾಜರಿ ರಜೆಗೆ ಮನವಿ ಸಲ್ಲಿಕೆ ಕೈದಿಗಳು ಹಕ್ಕೆಂಬುದು ನಿಜ. ಆದರಯಾವ ಕಾನೂನು ಅಡಿಯಲ್ಲಿ ದತ್ ಅವರಿಗೆ ಹೀಗೆ ರಜೆ ನೀಡಲಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ದತ್ಗೆ ಸಿಕ್ಕಿರುವ ಈ ಸೌಲಭ್ಯ ಉಳಿದವರಿಗೆ ಯಾಕೆ ಸಿಕ್ಕಿಲ್ಲ’ ಎಂದು ಗೃಹ ಸಚಿವ ರಾಮ್ ಶಿಂಧೆ ಪ್ರಶ್ನಿಸಿದ್ದಾರೆ.
ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಪುಣೆಯ ಬಂದೀಖಾನೆ ವಿಭಾಗದ ಡಿಐಜಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
೨೦೧೩ರ ಅಕ್ಟೋಬರ್ನಲ್ಲಿ ವೈದ್ಯಕೀಯ ಕಾರಣ ನೀಡಿ ಸಂಜಯ್ ದತ್ ೨೮ ದಿನಗಳ ಗೈರುಹಾಜರಿ ರಜೆ ಪಡೆದಿದ್ದರು. ಅದೇ ವರ್ಷ ಡಿಸೆಂಬರ್ನಲ್ಲಿ ತಮ್ಮ ಪತ್ನಿ ಮಾನ್ಯತಾ ಅವರ ಅನಾರೋಗ್ಯದ ಕಾರಣ ನೀಡಿ ೨೮ ದಿನಗಳ ರಜೆ ಪಡೆದುಕೊಂಡಿದ್ದರು. ಆದರೆ, ಮಾನ್ಯತಾ ಆ ಸಂದರ್ಭದಲ್ಲಿ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರಗಳು ಮಾಧ್ಯಮದಲ್ಲಿ ಪ್ರಕಟಗೊಂಡಿದ್ದವು. ಇದರಿಂದಾಗಿ ದತ್ ಸುಳ್ಳು ಹೇಳಿ ಗೈರುಹಾಜರಿ ರಜೆ ತೆಗೆದುಕೊಂಡಿದ್ದಾರೆ ಎನ್ನುವ ಅನುಮಾನ ಬಂದಿತ್ತು.
ಗೈರುಹಾಜರಿ ರಜೆ ಎಂದರೆ...
ಗೈರುಹಾಜರಿ ರಜೆ ಎಂದರೆ ಜೈಲು ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ನೀಡಲಾಗುವ ರಜೆ ಎಂದು ಅರ್ಥ. ಅಂದರೆ ಈ ಸಂದರ್ಭದಲ್ಲಿ ಕೈದಿಗೆ ಜೈಲಿನಿಂದ ಹೊರಹೋಗಲು ಅವಕಾಶ ನೀಡಲಾಗುತ್ತದೆ. ಆದರೆ, ಎಷ್ಟು ದಿನ ಹೀಗೆ ರಜೆ ಹಾಕಲಾಗುವುದೋ ಅಷ್ಟು ದಿನಗಳ ಶಿಕ್ಷೆಯನ್ನು ನಂತರ ಅನುಭವಿಸಬೇಕಾಗುತ್ತದೆ. ಅಂದರೆ, ಒಟ್ಟಾರೆ ಶಿಕ್ಷೆಯ ಅವಧಿಯಲ್ಲಿ ಯಾವುದೇ ಕಡಿತವಿರುವುದಿಲ್ಲ.