ನವದೆಹಲಿ (ಐಎಎನ್ಎಸ್): ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರಿಗೆ ರಕ್ಷಣೆ, ವೈದ್ಯಕೀಯ ಚಿಕಿತ್ಸೆ ಮತ್ತು ಕಾನೂನು ನೆರವು ಕಲ್ಪಿಸಲು ದೇಶದ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಅವರು ಸೋಮವಾರ ಇಲ್ಲಿ ಘೋಷಿಸಿದರು.
ಈ ಯೋಜನೆಗೆ ಸುಮಾರು ₨500 ಕೋಟಿ ಖರ್ಚು ಬರಲಿದ್ದು, ಈ ವರ್ಷಾಂತ್ಯಕ್ಕೆ ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸುದ್ದಿಗಾರರಿಗೆ ವಿವರಿಸಿದರು.
‘ಈ ಯೋಜನೆಗೆ ನಮ್ಮ ಬಳಿ ಹಣವಿದೆ. ಅಗತ್ಯಬಿದ್ದಲ್ಲಿ ನಿರ್ಭಯಾ ನಿಧಿಯಿಂದ ಹಣ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
2012ರ ಡಿಸೆಂಬರ್ನಲ್ಲಿ ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆ ಬಳಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನಿರ್ಭಯಾ ನಿಧಿ ಸ್ಥಾಪಿಸಿತ್ತು.