ಬೆಂಗಳೂರು: ಕಾವೇರಿ ನೀರು, ಒಳ ಚರಂಡಿ ಸಂಪರ್ಕ ಪಡೆದಿರುವ ಗ್ರಾಹಕರ ಸೇವಾ ಠಾಣೆವಾರು ಸಮೀಕ್ಷೆ ನಡೆಸಿ ಅದನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆಗೆ (ಜಿಐಎಸ್) ಅಳವಡಿಸುವ ಮೂಲಕ ಪ್ರತಿ ಸಂಪರ್ಕದ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲು ಜಲಮಂಡಳಿ ಮುಂದಾಗಿದೆ.
ಪ್ರತಿ ಸಂಪರ್ಕದಾರರ ಹೆಸರು, ವಿಳಾಸ, ನಿವೇಶನದ ಗಾತ್ರ, ಕಟ್ಟಡ ಎಷ್ಟು ಅಂತಸ್ತುಗಳನ್ನು ಒಳಗೊಂಡಿದೆ. ಕಟ್ಟಡಕ್ಕೆ ಯಾವ ರೀತಿಯ ಸಂಪರ್ಕ ಪಡೆಯಲಾಗಿದೆ ಎಂದು ಪರಿಶೀಲಿಸಲಾಗುವುದು. ಅದು ಗೃಹ ಬಳಕೆ ಸಂಪ ರ್ಕವೇ, ಗೃಹೇತರ ಸಂಪರ್ಕವೇ, ಅಥವಾ ಭಾಗಶಃ ಗೃಹೇತರ ಸಂಪ ರ್ಕವೇ ಎಂದು ಮಾಹಿತಿ ಸಂಗ್ರಹಿಸ ಲಾಗುವುದು. ಮನೆಗೆ ಬೆಸ್ಕಾಂ ನೀಡಿ ರುವ ಆರ್.ಆರ್. ಸಂಖ್ಯೆ, ಜಲಮಂಡಳಿ ನೀಡಿರುವ ಆರ್. ಆರ್. ಸಂಖ್ಯೆ, ಸ್ವತ್ತಿನ ಪಿಐಡಿ ಸಂಖ್ಯೆ, ಸರಾಸರಿ ಬಳಕೆ ಮಾಡುತ್ತಿರುವ ನೀರಿನ ಪ್ರಮಾಣ, ಕೊಳವೆ ಬಾವಿ ಇದೆಯೇ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಿ ಜಿಪಿಎಸ್ಗೆ ಅಳವಡಿ ಸುವ ಯೋಜನೆ ಕೈಗೆತ್ತಿಕೊಂಡಿದೆ.
ಈ ರೀತಿ ಮಾಡುವುದರಿಂದ ಯಾವುದೇ ಸಂಪರ್ಕದ ಆರ್. ಆರ್. ಸಂಖ್ಯೆ ಕ್ಲಿಕ್ಕಿಸಿ ಆ ಸಂಪರ್ಕದ ಸಂಪೂರ್ಣ ವಿವರ ಪಡೆಯಲು ಸಾಧ್ಯವಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಜಲಮಂಡಳಿಯ ದಕ್ಷಿಣ– 2 ಉಪವಿಭಾಗದ ಕೊತ್ತನೂರು ದಿಣ್ಣೆ ಸೇವಾ ಠಾಣಾ ವ್ಯಾಪ್ತಿಯಲ್ಲಿ ಇದೇ 13 ರಂದು ಸಮೀಕ್ಷಾ ಕಾರ್ಯ ಆರಂಭ ವಾಗಲಿದೆ. ಸೇವಾ ಠಾಣಾ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಸಂಪರ್ಕಗಳಿವೆ. ಇದೇ 13 ಹಾಗೂ 14ರಂದು ಮಂಡಳಿ ನಿಯೋಜಿಸಿರುವ 100 ನೋಡಲ್ ಅಧಿಕಾರಿಗಳು ದಿನಕ್ಕೆ 50 ಮನೆಗಳಂತೆ ಸಮೀಕ್ಷೆ ನಡೆಸಲಿದ್ದಾರೆ.
ಈ ರೀತಿ ಮಾಡುವುದರಿಂದ ಗ್ರಾಹ ಕರ ನಿಖರ ಮಾಹಿತಿ ಲಭ್ಯವಾಗುತ್ತದೆ. ಜತೆಗೆ ಅನಧಿಕೃತ ಸಂಪರ್ಕಗಳು, ಪ್ರೋರೇಟಾ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 7.70 ಲಕ್ಷ ಕುಟುಂಬಗಳು ಕುಡಿಯುವ ನೀರಿನ ಸಂಪರ್ಕ ಪಡೆದಿವೆ. ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಶೇ 30 ಮಂದಿ ನೀರಿನ ಸಂಪರ್ಕ ಸಕ್ರಮ ಮಾಡಿ ಕೊಂಡಿಲ್ಲ. ಈ ಕುಟುಂಬಗಳ ಸಂಖ್ಯೆ ಒಂದು ಲಕ್ಷದಷ್ಟು ಇದೆ ಎಂದು ಅಂದಾ ಜಿಸಲಾಗಿದೆ. ನಗರದ ಹೃದಯ ಭಾಗ ದಲ್ಲಿ ಸುಮಾರು 25 ಸಾವಿರ ಅನಧಿಕೃತ ಸಂಪರ್ಕಗಳಿವೆ ಎಂದು ಶಂಕಿಸಿದ್ದಾರೆ.
ಅಂಕಿ ಅಂಶಗಳು
7.70 ಲಕ್ಷ ಕಾವೇರಿ ನೀರಿನ ಬಳಕೆದಾರರು
1.25 ಲಕ್ಷ ಅನಧಿಕೃತ ಸಂಪರ್ಕಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.