ಪ್ರಧಾನಿ ನರೇಂದ್ರ ಮೋದಿ ಕೆಲವೊಮ್ಮೆ ತುಂಬು ಉತ್ಸಾಹದಿಂದ ಏನೇನೋ ಮಾತನಾಡಿಬಿಡುತ್ತಾರೆ. ಇತ್ತೀಚೆಗೆ ತಮ್ಮ ವಿದೇಶ ಪ್ರವಾಸದ ಸಮಯದಲ್ಲಿ ಟೊರಾಂಟೊದಲ್ಲಿ ‘ಹಿಂದಿನವರು ಮಾಡಿದ ಕೊಳಕು ತೆಗೆಯಬೇಕಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಸಭಿಕರು ಜಯಕಾರ ಹಾಕಿ ಚಪ್ಪಾಳೆ ತಟ್ಟಿದ್ದಾರೆ.
ಒಬ್ಬ ರಾಜಕೀಯ ಮುತ್ಸದ್ದಿಯಾದವರು ಹೊರದೇಶಗಳಲ್ಲಿ ಹೀಗೆ ಮಾತನಾಡಬಾರದು ಎನಿಸುತ್ತದೆ. ಭಾರತ ಅತ್ಯಂತ ಗಟ್ಟಿಮುಟ್ಟಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಅದಕ್ಕೆ ನಮ್ಮ ಹಿಂದಿನನಾಯಕರ ಕೊಡುಗೆಯನ್ನು ಗೌರವದಿಂದಲೇ ನೋಡಬೇಕಾಗುತ್ತದೆ. ಒಂದು ಬಹುದೊಡ್ಡ ಸಮಾಜದ ಆಡಳಿತ ವ್ಯವಸ್ಥೆಯಲ್ಲಿ ಹಗರಣಗಳು ನಡೆದಿರಬಹುದು. ಅವು ಮರುಕಳಿಸದಂತೆ ಬಿಗಿ ಕ್ರಮ ಕೈಗೊಳ್ಳಬೇಕು. ಅದಕ್ಕೆ ದೂರದೃಷ್ಟಿ, ಪಾರದರ್ಶಕತೆ ಅಳವಡಿಸಿಕೊಳ್ಳಬೇಕು. ಅದಕ್ಕೆ ಪ್ರತಿಪಕ್ಷಗಳ ಸಹಕಾರ ಪಡೆಯಬೇಕು. ನ್ಯಾಯಾಂಗದ ಬೆಂಬಲ ಬೇಕು.
ಬಿಜೆಪಿ ಆಡಳಿತ ನಡೆಸಿದ ರಾಜ್ಯಗಳೂ ಹಗರಣಗಳಿಂದ ಮುಕ್ತವಾಗಿಲ್ಲ ಎಂಬುದು ಪ್ರಧಾನಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆ ರಾಜ್ಯಗಳು ರಾಷ್ಟ್ರದ ಹೊರಗೇನೂ ಇಲ್ಲ. ನಾಯಕನಿಗೆ ನಡೆ ಮತ್ತು ನುಡಿಯಲ್ಲಿ ಸಂಯಮ ಅತ್ಯಂತ ಮುಖ್ಯ.