ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 30 ದಿನಗಳು ಪೂರ್ಣಗೊಂಡ ಹೊತ್ತಿನಲ್ಲಿ ದೇಶಕ್ಕೆ ಬಹಿರಂಗ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕೆನ್ನುವ ನಮ್ಮ ಉದ್ದೇಶ ಹಾಗೂ ಪ್ರಾಮಾಣಿಕತೆಯನ್ನು ಜನರಿಗೆ ಅರ್ಥಮಾಡಿಸುವಲ್ಲಿ ನಾವು ಸೋತಿದ್ದೇವೆ’ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
‘ನಾನು ಯಾರನ್ನೂ ದೂಷಿಸುವುದಿಲ್ಲ. ಆದರೆ, ಸರಿಯಾದ ವಿಷಯವನ್ನು ಸರಿಯಾದ ಸಮಯದಲ್ಲಿ ಸರಿಯಾದ ಜನರಿಗೆ ತಲುಪಿಸಲು ನಾವು ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದು ಮೋದಿ ಅವರು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.
‘ದೆಹಲಿಯಲ್ಲಿ ನನ್ನ ಮುಂದೆ ದೊಡ್ಡ ಸವಾಲೇ ಇದೆ. ನಮ್ಮ ಉದ್ದೇಶ ಹಾಗೂ ಕಳಕಳಿಯನ್ನು ಆಯ್ದ ಗುಂಪಿಗೆ ತಲುಪಿಸಬೇಕಾಗಿದೆ. ಇವರಲ್ಲಿ ಕೆಲವರು ಸರ್ಕಾರದ ಭಾಗವಾಗಿದ್ದಾರೆ. ಮತ್ತೆ ಕೆಲವರು ಸರ್ಕಾರಿ ವ್ಯವಸ್ಥೆಯ ಹೊರಗಿದ್ದಾರೆ. ಈ ಒಂದು ತಿಂಗಳಲ್ಲಿ ನಮ್ಮ ಸರ್ಕಾರಕ್ಕೆ ಸಂಬಧವೇ ಇಲ್ಲದಿದ್ದರೂ ಕೆಲವು ಅನಗತ್ಯ ವಿವಾದಗಳು ಹುಟ್ಟಿಕೊಂಡವು’ ಎಂದೂ ಅವರು ತಮ್ಮ ವೆಬ್ಸೈಟ್ನಲ್ಲಿ (www.narendramodi.in) ಬರೆದಿದ್ದಾರೆ. ಆ ವಿವಾದಗಳ ಬಗ್ಗೆ ವಿವರಣೆ ನೀಡಿಲ್ಲ.
ಮೋದಿ ವೆಬ್ಸೈಟ್ನಲ್ಲಿ ಬರೆದಿದ್ದೇನು...?
‘30 ದಿನಗಳ ಕೆಲಸ ತೃಪ್ತಿ ತಂದಿದೆ. ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿದ್ದೇವೆ. ಭವಿಷ್ಯದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಬದ್ಧತೆ ನಮಗಿದೆ. ಪ್ರತಿ ಸರ್ಕಾರಕ್ಕೂ ಕೆಲಸದಲ್ಲಿ ತೊಡಗಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಮಾಧ್ಯಮಗಳ ಭಾಷೆಯಲ್ಲಿ ಹೇಳುವುದಾದರೆ ಅದು “ಮಧುಚಂದ್ರ ಕಾಲ”. ಈ ಹಿಂದಿನ ಸರ್ಕಾರಗಳಿಗೆ 100 ದಿನಗಳವರೆಗೂ ಇಂಥ ಅವಕಾಶ ಸಿಕ್ಕಿತ್ತು. ನನಗೆ ಆ ಭಾಗ್ಯ ಸಿಗಲಿಲ್ಲ. 100 ದಿನಗಳನ್ನು ಮರೆತುಬಿಡಿ, ಅಧಿಕಾರ ಸ್ವೀಕರಿಸಿ ನೂರು ತಾಸುಗಳಲ್ಲಿಯೇ
ಯೂ ಟ್ಯೂಬ್ನಲ್ಲಿ ಸಾಧನೆಗಳ ವಿಡಿಯೊ |
---|
ಎನ್ಡಿಎ ಸರ್ಕಾರದ ಮೊದಲ ತಿಂಗಳ ಸಾಧನೆ ಬಿಂಬಿಸುವ ಐದೂವರೆ ನಿಮಿಷಗಳ ವಿಡಿಯೊ ತುಣುಕನ್ನು ಯೂಟ್ಯೂಬ್ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಸರ್ಕಾರ ಬಿಡುಗಡೆ ಮಾಡಿದೆ. |
ನಮ್ಮ ವಿರುದ್ಧ ಆರೋಪಗಳು ಶುರುವಾದವು. ವಿವಾದ ಹಾಗೂ ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ದೇಶ ಸೇವೆಯ ಏಕೈಕ ಗುರಿಯೊಂದಿಗೆ ಕೆಲಸ ಮಾಡುವಾಗ ಈವೆಲ್ಲ ಏನೂ ಅಲ್ಲ. ಆದ್ದರಿಂದ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ಅದೇ ನನಗೆ ಹೆಚ್ಚು ತೃಪ್ತಿ ಕೊಡುತ್ತದೆ’.
‘ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದಾಗ ನಾನು ಈ ಜಾಗಕ್ಕೆ ಹೊಸಬ ಎಂದು ಅಂದುಕೊಂಡಿದ್ದೆ. ಕೇಂದ್ರ ಸರ್ಕಾರದ ಕಾರ್ಯವಿಧಾನದ ಸೂಕ್ಷ್ಮ ಅರಿತುಕೊಳ್ಳಲು ನನಗೆ ಏನಿಲ್ಲವೆಂದರೂ ವರ್ಷ ಅಥವಾ ಎರಡು ವರ್ಷ ಬೇಕಾಗುತ್ತದೆ ಎಂದು ಕೆಲವರು ನಂಬಿದ್ದರು. ಅದೃಷ್ಟವಶಾತ್ ಈಗ ಆ ರೀತಿಯ ಭಾವನೆ ನನ್ನನ್ನು ಕಾಡುತ್ತಿಲ್ಲ. ನನ್ನ ಆತ್ಮವಿಶ್ವಾಸ ಹಾಗೂ ಛಲ ಮತ್ತಷ್ಟು ಹೆಚ್ಚಿದೆ’.
‘ಕಳೆದ ಒಂದು ತಿಂಗಳಿನಲ್ಲಿ ನಮ್ಮ ಸರ್ಕಾರ ಪ್ರತಿಯೊಂದು ಕ್ಷಣವನ್ನೂ ಜನರ ಶ್ರೇಯೋಭಿವೃದ್ದಿಗೆ ಮೀಸಲಿಟ್ಟಿದೆ. ಜನರ ಬೆಂಬಲ ಹಾಗೂ ಪ್ರೀತಿ ಅಭೂತಪೂರ್ವವಾದುದು. ಇದು, ಇನ್ನೂ ಹೆಚ್ಚು ಪರಿಶ್ರಮದಿಂದ ಕೆಲಸ ಮಾಡುವುದಕ್ಕೆ ನಮಗೆ ಸ್ಫೂರ್ತಿಯಾಗಿದೆ’ ಎಂದು ಮೋದಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಉಲ್ಲೇಖ: ‘39 ವರ್ಷಗಳ ಹಿಂದೆ ಇದೇ ದಿನ (ಜೂನ್ 26) ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಅದು ನಮ್ಮ ಇತಿಹಾಸದ ಕರಾಳ ಅವಧಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿದಲ್ಲಿ, ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದಲ್ಲಿ ಏನಾಗುತ್ತದೆ ಎನ್ನುವುದನ್ನು ಆ ಅವಧಿ ನೆನಪಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೆ ನಮ್ಮ ಪ್ರಜಾತಂತ್ರ ಉಳಿಯದು’ ಎಂದೂ ಅವರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.