ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ವಾರದ ಬೋಧನಾ ಅವಧಿಯನ್ನು 16 ಗಂಟೆಯಿಂದ 22 ಗಂಟೆಗೆ ಏರಿಸಿ, ಕಾಲೇಜು ಶಿಕ್ಷಣ ಇಲಾಖೆ ನವೆಂಬರ್ 10ರಂದು ಹೊರಡಿಸಿರುವ ಆದೇಶಕ್ಕೆ ಶಿಕ್ಷಣ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಸಾಧಕ ಬಾಧಕಗಳನ್ನು ಚರ್ಚಿಸದೆ ಅವೈಜ್ಞಾನಿಕವಾಗಿ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಪ್ರಾಧ್ಯಾಪಕರಿಗೆ ಹೊರೆಯಾಗುತ್ತದೆ. ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬೆಳವಣಿಗೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಬಿ.ಜಿ. ನಂದ-ಕುಮಾರ್ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
* ಪದವಿ ಕಾಲೇಜುಗಳ ಪ್ರಾಧ್ಯಾಪಕರ ವಾರದ ಬೋಧನಾ ಅವಧಿಯನ್ನು 22 ಗಂಟೆಗೆ ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆಯನ್ನು ಹೇಗೆ ಸಮರ್ಥಿಸುತ್ತೀರಿ?
ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) 2006ರಲ್ಲಿ ಪ್ರಾಧ್ಯಾಪಕರ ವೇತನ ಪರಿಷ್ಕರಿಸಿದ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅದರ ಪ್ರಕಾರ, ಪ್ರಾಧ್ಯಾಪಕರು ವಾರದಲ್ಲಿ 40 ಗಂಟೆ ಕೆಲಸ ಮಾಡಬೇಕು. ಇದರಲ್ಲಿ 16 ಗಂಟೆ ಬೋಧನೆ, 6 ಗಂಟೆ ಸಂಶೋಧನೆ ಮತ್ತು ಉಳಿದ ಸಮಯ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಬೇಕು.
ಆದರೆ, ನಮ್ಮ ರಾಜ್ಯದ ಬಹಳಷ್ಟು ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರಗಳಿಲ್ಲ. ಬೋಧಕರು ಸಂಶೋಧನೆಯಲ್ಲೂ ತೊಡಗಿಕೊಂಡಿಲ್ಲ. ಯಾರು ಸಂಶೋಧನೆ ನಡೆಸುತ್ತಾರೋ ಅವರಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಸಂಶೋಧನೆ ನಡೆಸದ ಪ್ರಾಧ್ಯಾಪಕರು ಮಾತ್ರ 22 ಗಂಟೆ ಬೋಧನೆ ಮಾಡಬೇಕು ಎಂದು ಸೂಚಿಸಿದ್ದೇವೆ.
* ಪ್ರಾಧ್ಯಾಪಕರ ಜ್ಞಾನಾರ್ಜನೆಗೆ, ಸಂಶೋಧನೆಗೆ ಇಲಾಖೆಯೇ ಅಡ್ಡಗಾಲು ಹಾಕಿದಂತೆ ಆಗಲಿಲ್ಲವೇ?
ಪ್ರಾಧ್ಯಾಪಕರು ಸಂಶೋಧನೆ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ಸಂಶೋಧನೆ ಮಾಡಬೇಡಿ ಎಂದು ಇಲಾಖೆ ಯಾರಿಗೂ ಹೇಳುತ್ತಿಲ್ಲ. ಮಾಡಿ ಅಂತಲೇ ಹೇಳುತ್ತಿದ್ದೇವೆ. ಅಂತಹವರಿಗೆ ಈ ಆದೇಶದಿಂದ ವಿನಾಯಿತಿಯನ್ನೂ ನೀಡಲಾಗಿದೆ.
* ಬೋಧನಾ ಅವಧಿ ವಿಸ್ತರಣೆಯಿಂದ ಪ್ರಾಧ್ಯಾಪಕರಿಗೆ ಹೊರೆಯಾಗುತ್ತದೆ ಎಂಬ ಮಾತು ಶಿಕ್ಷಣ ವಲಯದಲ್ಲೇ ಕೇಳಿಬಂದಿದೆಯಲ್ಲಾ?
ಹೊಸ ಆದೇಶದಿಂದಾಗಿ ಪ್ರಾಧ್ಯಾಪಕರಿಗೆ ಹೆಚ್ಚಿನ ಹೊರೆಯಾಗದು. ವಾರಕ್ಕೆ 22 ಗಂಟೆ ಅಂದರೆ ಅವರು ಪ್ರತಿ ದಿನ ಮೂರರಿಂದ –ನಾಲ್ಕು ಗಂಟೆ ಅಧ್ಯಾಪನ ಮಾಡಬೇಕಾಗಬಹುದು.
* ಇದೊಂದು ಅವೈಜ್ಞಾನಿಕ ಆದೇಶ ಎಂದು ಸರ್ಕಾರಿ ಮತ್ತು ಅತಿಥಿ ಉಪನ್ಯಾಸಕರು ಜರಿಯುತ್ತಿದ್ದಾರಲ್ಲಾ?
ಯುಜಿಸಿ ನಿಯಮಾವಳಿ ಅಡಿಯಲ್ಲಿ ಮತ್ತು ಸರ್ಕಾರದ ಆದೇಶದ ಪ್ರಕಾರ, ನಾವು ಈ ಸುತ್ತೋಲೆ ಹೊರಡಿಸಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾದುದು ಉನ್ನತ ಶಿಕ್ಷಣ ಸಚಿವರು. ಪರ–ವಿರೋಧಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದೇಶವನ್ನು ವಾಪಸ್ ಪಡೆಯವಂತೆ ಮನವಿಗಳು ಬಂದಿವೆ.
* ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಅತಿಥಿ ಉಪನ್ಯಾಸಕರಿಗೆ ಯಾವುದೇ ತೊಂದರೆ ಆಗಿಲ್ಲ. ನಾವು ಯಾರನ್ನೂ ಕೆಲಸದಿಂದ ತೆಗೆದು ಹಾಕಿಲ್ಲ.
* ಹಣಕಾಸು ಇಲಾಖೆ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆಯೇ?
ಸಂಶೋಧನೆಗೆ ಮೀಸಲಾಗಿರುವ ಅವಧಿಯನ್ನು ಬೋಧನಾ ಅವಧಿಗೆ ಸೇರ್ಪಡೆಗೊಳಿಸಬೇಕು ಎಂಬ ನಿಲುವನ್ನು ಹಣಕಾಸು ಇಲಾಖೆ ತೆಗೆದುಕೊಂಡಿರುವುದು ನಿಜ. ಅಂತಿಮವಾಗಿ ಉನ್ನತ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ. ಅದನ್ನು ಪಾಲಿಸುವುದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ.
* ಕಾಲೇಜುಗಳಲ್ಲಿ ಸಂಶೋಧನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಇಲಾಖೆ ಕ್ರಮ ಕೈಗೊಳ್ಳಬಹುದಲ್ಲವೇ?
ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ತೆರೆಯಲು ಆಯಾ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಬೇಕು. ಇಲಾಖೆ ವ್ಯಾಪ್ತಿಯಲ್ಲಿ ಇದಕ್ಕೆ ಹೆಚ್ಚು ಅವಕಾಶಗಳಿಲ್ಲ. ಯಾವುದೆಲ್ಲ ಮಾಡಬಹುದೋ ಆ ಕೆಲಸವನ್ನು ಮಾಡುತ್ತಿದ್ದೇವೆ. ಪ್ರತಿ ಕಾಲೇಜಿನಲ್ಲೂ ಸಂಶೋಧನಾ ಕೇಂದ್ರ ತೆರೆಯುವುದು ಸುಲಭದ ಕೆಲಸವಲ್ಲ. ಎಲ್ಲವನ್ನೂ ಒಂದೇ ಸಲ ಮಾಡಲು ಸಾಧ್ಯವೇ? ನಿಜ ಹೇಳಬೇಕೆಂದರೆ ಹಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೊಠಡಿಗಳು, ಶೌಚಾಲಯಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಅವು-ಗಳನ್ನು ಒದಗಿಸುವ ಕೆಲಸ ಮೊದಲು ಆಗಬೇಕು.
* ಮುಂದೆ ಏನು ಮಾಡುತ್ತೀರಿ?
ಈ ಆದೇಶ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಆದೇಶ ಹೊರಡಿಸಿರುವುದಕ್ಕೆ ಆಕ್ಷೇಪಗಳು ಬಂದಿವೆ. ಅವುಗಳನ್ನು ಉನ್ನತ ಶಿಕ್ಷಣ ಖಾತೆ ಸಚಿವರ ಮುಂದೆ ಇಡಲಿದ್ದೇವೆ. ನಿರ್ಧಾರ ಕೈಗೊಳ್ಳ-ಬೇಕಾದುದು ಅವರೇ.
* ಆದೇಶ ವಾಪಸ್ ಪಡೆಯುವ ಸಾಧ್ಯತೆ ಇದೆಯೇ?
ಈ ಬಗ್ಗೆ ನಾನು ಏನೂ ಹೇಳಲಾರೆ. ಸಚಿವರ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ವರ್ಷದ ಮಟ್ಟಿಗೆ ಆದೇಶವನ್ನು ಅಮಾನತಿನಲ್ಲಿ ಇಡುವ ಸಾಧ್ಯತೆ ಇದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ ಎಂಬ ನಿರೀಕ್ಷೆ ನನ್ನದು.
* ಹಾಗಾದರೆ ಮುಂದಿನ ವರ್ಷದಿಂದ ಈ ಆದೇಶ ಕಡ್ಡಾಯವೇ?
ಅದನ್ನು ಈಗಲೇ ಹೇಳಲಾಗದು. ಕಾದು ನೋಡಬೇಕಷ್ಟೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.