ಬೆಂಗಳೂರು: ಲಾಟರಿ ಹಗರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿರಬಹುದು. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣಗಳು ಹೊರಬರಬಹುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದರು.
‘ದೇವೇಗೌಡರು ಪ್ರಧಾನಿಯಾಗಿದ್ದು ನಾಡಿನ ದುರ್ದೈವ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾರನೆಯ ದಿನವೇ ಸುದ್ದಿಗೋಷ್ಠಿ ನಡೆಸಿದ ದೇವೇಗೌಡ, ‘ನಾನು ಇನ್ನೂ ಸಂಸದನಾಗಿ ಮುಂದುವರಿದಿರುವುದು ನನ್ನ ದುರ್ದೈವ’ ಎಂದು ಹೇಳಿದರು.
‘ಸಂಸತ್ತಿನ ಕಲಾಪದಲ್ಲಿ ಮಾತನಾಡಲು ಅವಕಾಶ ಸಿಗುವುದು ಸಂಸತ್ತಿನಲ್ಲಿ ಪಕ್ಷ ಹೊಂದಿರುವ ಸಂಖ್ಯಾ ಬಲದ ಆಧಾರದಲ್ಲಿ. ನಮ್ಮ ಪಕ್ಷ ಇಬ್ಬರು ಸಂಸದರನ್ನು ಮಾತ್ರ ಹೊಂದಿದೆ. ಹಾಗಾಗಿ ನನಗೆ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ದೊರೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ನಾನು ಹಿಂದೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ’ ಎಂದರು.