ಬಾಗಲಕೋಟೆ: ‘ಸಕ್ಕರೆ ಕಾರ್ಖಾನೆಗಳು ತಕ್ಷಣ ಕಬ್ಬು ನುರಿಸುವುದನ್ನು ಆರಂಭಿಸ-ದಿದ್ದರೆ, ಸರ್ಕಾರವೇ ಕಾರ್ಖಾನೆಗಳನ್ನು ವಶಕ್ಕೆ ಪಡೆದು, ಕಬ್ಬು ನುರಿಸಲು ವ್ಯವಸ್ಥೆ ಮಾಡಲಿದೆ’ ಎಂದು ಸಕ್ಕರೆ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಎಚ್ಚರಿಕೆ ನೀಡಿದರು.
ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಗೋವಿಂದ ಕಾರಜೋಳ ಹಾಗೂ ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಈ ಎಚ್ಚರಿಕೆ ನೀಡಿದರು.
‘ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಇದೇ 25 ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಕಾರ್ಖಾನೆಗಳನ್ನು ತಕ್ಷಣ ಪುನರಾರಂಭಿಸುವಂತೆ ಸಭೆಯಲ್ಲಿ ಸೂಚಿಸಲಾಗುವುದು. ಒಂದು ವೇಳೆ ಕಬ್ಬು ನುರಿಸಲು ಒಪ್ಪದಿದ್ದರೆ, ತಕ್ಷಣ ಕಾರ್ಖಾನೆಗಳನ್ನು ಸರ್ಕಾರ ವಶಕ್ಕೆ ಪಡೆದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕಬ್ಬು ನುರಿಸುವುದನ್ನು ಪ್ರಾರಂಭಿಸಲಿದೆ’ ಎಂದು ಸಚಿವರು ಭರವಸೆ ನೀಡಿದರು.
ವಶಕ್ಕೆ ಸಿದ್ಧತೆ
ರೈತರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ, ‘ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಸಚಿವರು ಪ್ರಯತ್ನಿಸುತ್ತಿದ್ದು, ಒಪ್ಪದಿದ್ದಲ್ಲಿ ಅಂತಹ ಕಾರ್ಖಾನೆಗಳನ್ನು ವಶಪಡಿಸಿಕೊಳ್ಳಲು ಸಿದ್ಧತೆ ನಡೆದಿದೆ’ ಎಂದರು.
ಸಚಿವರು ಮತ್ತು ಜಿಲ್ಲಾಧಿಕಾರಿ ನೀಡಿದ ಭರವಸೆಯಿಂದ ಸಂತುಷ್ಟರಾದ ಸಾವಿರಾರು ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯನ್ನು ಕೈಬಿಟ್ಟರು.
ತಿದ್ದುಪಡಿಗೆ ಆಗ್ರಹ
ರೈತರ ಒಪ್ಪಿಗೆ ಇಲ್ಲದೇ ರಾಜ್ಯ ಸರ್ಕಾರ ಎಸ್ಎಪಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಎಕ್ಸ್ಗೇಟ್ ಪದ್ಧತಿ ಸೇರ್ಪಡೆ ಮಾಡಿರುವುದನ್ನು ಗೋವಿಂದ ಕಾರಜೋಳ ಖಂಡಿಸಿದರು.
ತಕ್ಷಣ ಕಾಯ್ದೆಗೆ ಮರು ತಿದ್ದುಪಡಿ ಮಾಡಿ, ಎಕ್ಸ್ಗೇಟ್ ಬದಲು ಎಕ್ಸ್ಫೀಲ್ಡ್ ಪದ್ಧತಿ ಅಳವಡಿಸಬೇಕು. ಇಲ್ಲವಾದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಜೆಪಿ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ರಾಷ್ಟ್ರೀಕರಣಕ್ಕೆ ಒತ್ತಾಯ
ಸರ್ಕಾರ ಮತ್ತು ಕೋರ್ಟ್ ಆದೇಶ ಉಲ್ಲಂಘಿಸುತ್ತಿರುವ ಹಾಗೂ ಪ್ರತಿ ವರ್ಷ ರೈತರಿಗೆ ತೊಂದರೆ ನೀಡುತ್ತಿರುವ ಸಕ್ಕರೆ ಕಾರ್ಖಾನೆಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.