ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಸತೀಶ್ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಆಗ್ರಹಿಸಿ ಸಚಿವಾಲಯ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿಧಾನಸೌಧ ಮೂರನೇ ಮಹ ಡಿಯಲ್ಲಿರುವ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ಕಚೇರಿ ಎದುರು ನೂರಾರು ನೌಕರರು ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ನಂತರ ಮತ್ತೊಮ್ಮೆ ಪ್ರತಿಭಟನೆ ಮುಂದುವ ರಿಸಿದರೂ ಜಾಧವ್ ಅವರನ್ನು ಭೇಟಿ ಮಾಡಲು ಪ್ರತಿಭಟನಾಕಾರರಿಗೆ ಸಾಧ್ಯ ಆಗಲಿಲ್ಲ.
‘ಬೇರೆ ಇಲಾಖೆಯಿಂದ ನಿಯೋಜನೆ ಮೇಲೆ ಬಂದವರು ಗರಿಷ್ಠ 5 ವರ್ಷಗಳಿಗಿಂತ ಹೆಚ್ಚು ಇರಬಾರದು. ಆದರೆ, ಗೃಹ ಇಲಾಖೆಯಲ್ಲಿ ಬೆರಳಚ್ಚು ವಿಭಾಗ ಸಿಬ್ಬಂದಿ ಆಗಿದ್ದ ಸತೀಶ್ ನಿಯೋಜನೆ ಮೇಲೆ ವಿಧಾನಸೌಧಕ್ಕೆ ಬಂದು 7 ವರ್ಷ ದಾಟಿದೆ. ಆ ವ್ಯಕ್ತಿ ಕೋರದಿದ್ದರೂ ಹಿರಿಯ ಅಧಿಕಾರಿಗಳು ಇಲ್ಲಿಯೇ ಉಳಿಸಿಕೊಂಡಿದ್ದಾರೆ’ ಎಂದು ಕರ್ನಾಟಕ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಮಹಾದೇವಯ್ಯ ಮಠಪತಿ ಆರೋಪಿಸಿದರು.
‘ಈ ಮೊದಲು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಸೇವೆಗಳು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸತೀಶ್ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ, ಆಡಳಿತಾತ್ಮಕ ತನಿಖೆಗೆ ಸಂಬಂಧಿಸಿದ ವಿಷಯಗಳನ್ನು ಅವರಿಗೆ ತಿಳಿಸಿ ಹಿರಿಯ ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿದ್ದರು. ಇದು ಸಚಿವಾಲಯದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿತ್ತು’ ಎಂದರು.
‘ಸತೀಶ್ ಕಳೆದೊಂದು ವರ್ಷದಿಂದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರವಿಂದ್ ಜಾಧವ್ ಅವರನ್ನು ಭೇಟಿ ಮಾಡಲು ಸತೀಶ್ ಬಳಿ ಸಮಯ ಕಾಯ್ದಿರಿಸ ಬೇಕಾಗಿದೆ. ಅವರನ್ನು ಮಾತೃ ಇಲಾಖೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.