ಬೆಂಗಳೂರು: ‘ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಕೇಂದ್ರಗಳಿಗಿಂತ ಕಡೆಯಾಗಿವೆ’ ಎಂಬ ಸಚಿವ ಎಚ್.ಆಂಜನೇಯ ಅವರ ಹೇಳಿಕೆಯ ಹಿಂದಿನ ವಿಚಾರ ಸರಿಯಾಗಿದೆ. ಆದರೆ, ಅವರ ಪದ ಬಳಕೆ ಸರಿಯಾಗಿಲ್ಲ ಅಷ್ಟೆ’ ಎಂದು ಸಚಿವೆ ಉಮಾಶ್ರೀ ಸಮರ್ಥಿಸಿಕೊಂಡರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಚಿವರು ಮಾತನಾಡಿರುವುದನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇನೆ. ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ನೀಡುವುದೇ ಮೂಲ ಉದ್ದೇಶವಾಗಿರಬೇಕು ಎಂಬ ಅರ್ಥದಲ್ಲಿ ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು. ರಾಜ್ಯಸಭೆಗೆ ಹೊರ ರಾಜ್ಯದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಕಾಂಗ್ರೆಸ್ಗೆ ಇಲ್ಲ. ಅರ್ಹರಾದ ಅನೇಕರ ಹೆಸರು ಕಾಂಗ್ರೆಸ್ನಿಂದ ಕೇಳಿ ಬರುತ್ತಿದೆ. ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರು, ಸಾಹಿತಿಗಳು ಇದ್ದಾರೆ. ಅವರಿಗೆ ಅವಕಾಶ ನೀಡಲಾಗುವುದು. ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.
‘18 ವರ್ಷಗಳಿಂದ ವೆಂಕಯ್ಯ ನಾಯ್ಡು ಅವರೊಬ್ಬರೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಾರೆ. ಬಿಜೆಪಿಗೆ ಅದು ಅನಿವಾರ್ಯ ಇರಬಹುದು. ನಮ್ಮಲ್ಲಿ ಆ ಪದ್ಧತಿ ಇಲ್ಲ. ಈ ಬಾರಿಯೂ ನಾವು ಕನ್ನಡಿಗರಿಗೆ ಆದ್ಯತೆ ನೀಡುತ್ತೇವೆ’ ಎಂದರು.