ನವದೆಹಲಿ (ಪಿಟಿಐ): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ನಿಹಾಲ್ಚಂದ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಸಾಮಾನ್ಯ ಆರೋಪಿಗಳಿಗೆ ನೀಡುವ ಶಿಕ್ಷೆಯನ್ನೇ ಸಚಿವರಿಗೂ ನೀಡಬೇಕು ಎಂದು ಆಗ್ರಹಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಈ ಕುರಿತು ಪ್ರಧಾನಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ನಿಹಾಲ್ಚಂದ್ ಹಾಗೂ 16 ಜನರ ವಿರುದ್ಧ ರಾಜಸ್ತಾನದ 24 ವರ್ಷದ ವಿವಾಹಿತ ಮಹಿಳೆ 2011ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಖುದ್ದು ಹಾಜರಾತಿಗೆ ಜೈಪುರ ನ್ಯಾಯಾಲಯ ನೋಟಿಸ್ ನೀಡಿತ್ತು.ನಿಹಾಲ್ಚಂದ್ ಕೇಂದ್ರ ಸಂಪುಟದಲ್ಲಿರುವ ರಾಜಸ್ತಾನದ ಏಕೈಕ ಸಂಸದರಾಗಿದ್ದಾರೆ.
‘ಸಚಿವರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಪ್ರಧಾನಿ ಯಾಕೆ ಮೌನ ವಹಿಸಿದ್ದಾರೆ ’ ಎಂದು ಕಾಂಗ್ರೆಸ್ ಕೆಣಿಕಿದೆ. ಸಚಿವರ ತಲೆದಂಡಕ್ಕೆ ಅದು ಪಟ್ಟು ಹಿಡಿದಿದೆ.
‘ಮಹಿಳೆಯರ ರಕ್ಷಣೆ ಬಗ್ಗೆ ಭಾಷಣ ಮಾಡುವ ಬದಲು ಆರೋಪಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಲಿ’ ಎಂದು ಕಾಂಗ್ರೆಸ್ ನಾಯಕಿ ಶೋಭಾ ಓಜಾ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.