ನವದೆಹಲಿ (ಪಿಟಿಐ): ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ, ಮಹಾರಾಷ್ಟ್ರದ ಹಿಂದುಳಿದ ವರ್ಗದ ಜನಪ್ರಿಯ ನಾಯಕ ಗೋಪಿನಾಥ್ ಮುಂಡೆ (63) ಅವರು ಮಂಗಳವಾರ ನಸುಕಿನಲ್ಲಿ ಇಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಂಡ ವಿಜಯದ ಸಂಭ್ರಮದ ಗುಂಗಿನಲ್ಲಿರುವ ಬಿಜೆಪಿಗೆ ಅವರ ಅಕಾಲಿಕ ಮರಣ ದೊಡ್ಡ ಆಘಾತ ನೀಡಿದೆ.
ಇದೇ ಮೊದಲ ಬಾರಿ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರಿದ್ದಾರೆ. ಒಬ್ಬ ಪುತ್ರಿ ಮಹಾರಾಷ್ಟ್ರ ಭೀಡ್್ ಜಿಲ್ಲೆಯ ಪರಳಿ ಕ್ಷೇತ್ರದ ಶಾಸಕಿ.
ಭೀಡ್ನಲ್ಲಿ ಪಕ್ಷದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದ ಮುಂಡೆ ಅವರು ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಪೃಥ್ವಿರಾಜ್ ರಸ್ತೆ-–ತುಘಲಕ್್ ರಸ್ತೆ ಸೇರುವ ಅರಬಿಂದೊ ವೃತ್ತದಲ್ಲಿ ಇಂಡಿಕಾ ಕಾರೊಂದು ಸಚಿವರಿದ್ದ ಕಾರಿನ ಮಗ್ಗುಲಿಗೆ ಡಿಕ್ಕಿ ಹೊಡೆಯಿತು.
‘6.30ರ ಸುಮಾರಿಗೆ ಅವರನ್ನು ಏಮ್ಸ್ಗೆ ದಾಖಲಿಸಲಾಯಿತು. ಆಗ ಅವರ ಉಸಿರಾಟ ಸರಾಗವಾಗಿರಲಿಲ್ಲ. ನಾಡಿಮಿಡಿತ, ಹೃದಯದ ಬಡಿತ ಸ್ಥಗಿತಗೊಂಡಿದ್ದವು. ಪ್ರಾಣ ಉಳಿಸಲು ಸಾಕಷ್ಟು ಹೋರಾಡಿದೆವು. ಆದರೆ ಪ್ರಯೋಜನವಾಗಲಿಲ್ಲ. ಬೆಳಿಗ್ಗೆ 7.20ರ ಹೊತ್ತಿಗೆ ಅವರು ಕೊನೆಯುಸಿರೆಳೆದರು’ ಎಂದು ಏಮ್ಸ್ ವಕ್ತಾರ ಡಾ.ಅಮಿತ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು.
‘ಅವರು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಇದಕ್ಕೆ ಔಷಧವನ್ನೂ ತೆಗೆದುಕೊಳ್ಳುತ್ತಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಅವರಿಗೆ ಅಪಘಾತದಲ್ಲಿ ಗಂಭೀರ ಗಾಯಗಳೇನೂ ಆಗಿರಲಿಲ್ಲ’ ಎಂದೂ ಹೇಳಿದರು.
ಕತ್ತಿನ ಮೂಳೆ ಮುರಿತ: ‘ಅಪಘಾತದಿಂದ ಮುಂಡೆ ಅವರ ಕತ್ತಿನ ಮೂಳೆಗಳು ಮುರಿದಿವೆ. ಇದರಿಂದಾಗಿ ಮಿದುಳಿಗೆ ಆಮ್ಲಜನಕ ಹಾಗೂ ರಕ್ತ ಪೂರೈಕೆ ಸ್ಥಗಿತಗೊಂಡಿರಬೇಕು. ಅಲ್ಲದೇ ಅವರ ಪಿತ್ತಕೋಶದಲ್ಲಿ 23 ಕಡೆ ಗಾಯಗಳಾಗಿವೆ. ಪರಿಣಾಮವಾಗಿ ಅವರ ಹೊಟ್ಟೆಯಲ್ಲಿ ಒಂದೂವರೆ ಲೀಟರ್ ರಕ್ತ ಸ್ರಾವವಾಗಿತ್ತು’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
‘ಅಪಘಾತವಾಗಿದ್ದೇ ತಡ ಸಚಿವರು ತೀವ್ರ ಆಘಾತಕ್ಕೆ ಒಳಗಾದರು. ಇದರಿಂದಾಗಿ ಅವರಿಗೆ ಹೃದಯಾಘಾತವಾಗಿರಬೇಕು’ ಎಂದು ಮುಂಡೆ ಜತೆ ಕಾರಿನಲ್ಲಿದ್ದ ಅವರ ಕಾರ್ಯದರ್ಶಿ ಎಸ್.ನಾಯರ್ ಹೇಳಿದ್ದಾರೆ.
‘ಸಚಿವರ ಕಾರಿಗೆ ಡಿಕ್ಕಿ ಹೊಡೆದಿದ್ದು ಇಂಡಿಕಾ ಕಾರು. ಅಪಘಾತಕ್ಕೂ ಮುನ್ನ ಚಾಲಕ ಸಿಗ್ನಲ್ ತಪ್ಪಿಸಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ’ ಎಂದು ಹಿರಿಯ ಪೊಲೀಸರೊಬ್ಬರು ಮಾಹಿತಿ ನೀಡಿದರು.
ಅಂತಿಮ ದರ್ಶನ
ಮಧ್ಯಾಹ್ನ 12.30 ರಿಂದ 1.30ರವರೆಗೆ ಮುಂಡೆ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ ಇತರರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆ
ಅವರ ಅಂತ್ಯಕ್ರಿಯೆ ಭೀಡ್ ಜಿಲ್ಲೆಯ ಸ್ವಗ್ರಾಮ ನಾರ್ಥಾದಲ್ಲಿ ಬುಧವಾರ ನಡೆಯಲಿದೆ.
ಸಂತಾಪ ಸೂಚಕ ಸಭೆ: ಸಂಜೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಮುಂಡೆ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಮುಂಡೆ ಗೌರವಾರ್ಥ ಮಂಗಳವಾರ ದೆಹಲಿ ಸೇರಿದಂತೆ ರಾಜ್ಯಗಳ ರಾಜಧಾನಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು.
ಪಿತ್ತಕೋಶಕ್ಕೆ ಹಾನಿ, ಹೃದಯಾಘಾತ
‘ಅಪಘಾತದಲ್ಲಿ ಅವರ ಪಿತ್ತಕೋಶಕ್ಕೆ ಪೆಟ್ಟಾಗಿದೆ. ಘಟನೆಯಿಂದ ವಿಚಲಿತರಾಗಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.
‘ಪಿತ್ತಕೋಶಕ್ಕೆ ಹಾನಿಯಾಗಿದ್ದರಿಂದ ದೇಹದೊಳಗೆ ರಕ್ತಸ್ರಾವವಾಗಿದೆ. ನಂತರ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ’ ಎಂದೂ ಏಮ್ಸ್ ಮೂಲಗಳು ತಿಳಿಸಿವೆ.
ನೀರು ಕೇಳಿದ್ದರು...
ಪ್ರಜ್ಞಾಶೂನ್ಯರಾಗುವುದಕ್ಕೆ ಮುನ್ನ ಅವರು ಕುಡಿಯಲು ನೀರು ಕೇಳಿದ್ದರು. ಅಲ್ಲದೇ ಕೂಡಲೇ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಚಾಲಕನಿಗೆ ಸೂಚಿಸಿದ್ದರು.
ತಡಮಾಡದೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಅಷ್ಟರಲ್ಲಾಗಲೇ ಅವರ ಹೃದಯ ಬಡಿತ ನಿಂತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.