ನವದೆಹಲಿ (ಪಿಟಿಐ): ಮುಂದಿನ ಸೇನಾ ಮುಖ್ಯಸ್ಥರಾಗಲಿರುವ ದಲ್ಬೀರ್ ಸಿಂಗ್ ಸುಹಾಗ್ ಅವರ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡಿರುವ ವಿದೇಶಾಂಗ ರಾಜ್ಯ ಸಚಿವರಾಗಿರುವ ಜನರಲ್ (ನಿವೃತ್ತ) ವಿ.ಕೆ.ಸಿಂಗ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಒಂದೆಡೆ ಸರ್ಕಾರವು ಸುಹಾಗ್ ಅವರನ್ನು ಸಮರ್ಥಿಸಿಕೊಂಡು ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದರೆ, ಮತ್ತೊಂದೆಡೆ ಸಂಪುಟದ ಭಾಗವಾಗಿರುವ ಸಿಂಗ್ ಅವರು ಸುಹಾಗ್ ಅವರನ್ನು ಯದ್ವಾತದ್ವಾ ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಧ್ವನಿ ಎತ್ತಿದೆ.
‘ತಮ್ಮದೇ ಸರ್ಕಾರವು ತಮ್ಮ ವಿರುದ್ಧ ದೋಷಾರೋಪ ಹೊರಿಸಿದ ನಂತರವೂ ಸಿಂಗ್ ಅವರು ಬುಧವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ತೀರಾ ಅನುಚಿತ ಭಾಷೆ ಬಳಸಿ ಸುಹಾಗ್ ಅವರನ್ನು ಟೀಕಿಸಿದ್ದಾರೆ. ಮುಂದಿನ ಸೇನಾ ಮುಖ್ಯಸ್ಥರಾಗುವವರನ್ನು ಕ್ರಿಮಿನಲ್ ಅಪರಾಧಿ ಎಂದೂ, ಅವರ ಅಧೀನದಲ್ಲಿ ಕೆಲಸ ಮಾಡುವವರನ್ನು ಡಕಾಯಿತರೆಂದೂ ಕರೆದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಹೇಳಿದೆ.
ನೇಮಕ ಅಂತಿಮ: ಮುಂದಿನ ಸೇನಾ ಮುಖ್ಯಸ್ಥರಾಗಿ ಲೆ.ಜ.ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕಾತಿ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡರು.
ಸಿಂಗ್ ಟ್ವೀಟ್ನಲ್ಲಿ ಏನಿದೆ?
‘ಸೇನಾ ತುಕಡಿಯ ಯೋಧರು ಅಮಾಯಕರನ್ನು ಕೊಂದು, ಡಕಾಯಿತಿಯಲ್ಲಿ ಮುಳುಗಿದ್ದಾಗಲೂ ಅದರ ಮುಖ್ಯಸ್ಥರಾದವರು ತಪ್ಪಿತಸ್ಥರನ್ನೇ ರಕ್ಷಿಸಲು ಯತ್ನಿಸುತ್ತಿದ್ದಾಗ ಅಂಥವರನ್ನು ದೂಷಿಸಬಾರದೆ?