ಮುಂಬೈ (ಐಎಎನ್ಎಸ್): ಬಿಜೆಪಿ–ಸೇನಾ ಮೈತ್ರಿ ಮುರಿದು ಬಿದ್ದ ಬಳಿಕ ಮಹಾರಾಷ್ಟ್ರದಲ್ಲಿ ಸಣ್ಣ ಪಕ್ಷಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ.
ರಾಮದಾಸ್ ಅಠಾವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಚುನಾವಣೆಯಲ್ಲಿ ಕನಿಷ್ಠ ಏಳು ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೇನಾ ಹಾಗೂ ಬಿಜೆಪಿಯನ್ನು ಗುರುವಾರ-ದವರೆಗೂ ಬೇಡಿಕೊಂಡಿತ್ತು. ಯಾವಾಗ ಮೈತ್ರಿ ಮುರಿದು ಬಿತ್ತೋ ಆವಾಗಿನಿಂದ ಬಿಜೆಪಿ ಹಾಗೂ ಸೇನಾ ಆರ್ಪಿಐಗೆ ಗಾಳ ಹಾಕಲು ಶುರುಮಾಡಿವೆ.
‘ಸೇನಾ ಅಧಿಕಾರಕ್ಕೆ ಬಂದಲ್ಲಿ ನನಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇನ್ನು ಬಿಜೆಪಿಯವರು ಕೇಂದ್ರ ಸಂಪುಟ ದರ್ಜೆ ಸಚಿವ ಸ್ಥಾನ ಅಥವಾ ರಾಜ್ಯಪಾಲರ ಹುದ್ದೆ ನೀಡುವುದಾಗಿ ಹೇಳುತ್ತಿದ್ದಾರೆ.
ಚುನಾವಣೆಯಲ್ಲಿ ೨೫–೩೦ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ. ಶೀಘ್ರವೇ ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದರು.