ಬೆಂಗಳೂರು: ತಮಗೆ ನೀಡಿರುವ ಅಬಕಾರಿ ಖಾತೆಯನ್ನು ಬದಲಾವಣೆ ಮಾಡಲೇಬೇಕೆಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿದಿದ್ದಾರೆ. ವಿಧಾನಮಂಡಲ ಅಧಿವೇಶನದ ಬಳಿಕ ಸತೀಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ನೀಡುವ ಸಾಧ್ಯತೆ ಇದೆ.
ಶುಕ್ರವಾರ ರಾತ್ರಿ ನಡೆದ ಮಾತುಕತೆ ವೇಳೆ ಸತೀಶ್ ಖಾತೆ ಬದಲಾವಣೆಗೆ ಪಟ್ಟು ಹಿಡಿದರು. ತಕ್ಷಣವೇ ಖಾತೆ ಬದಲಾವಣೆ ಅಸಾಧ್ಯ ಎಂದು ಅವರಿಗೆ ಮನವರಿಕೆ ಮಾಡಿದ ಮುಖ್ಯಮಂತ್ರಿ, ಅಧಿವೇಶನ ಮುಗಿದ ಬಳಿಕ ಖಾತೆ ಬದಲಿಸುವ ಭರವಸೆ ನೀಡಿದರು. ತಮ್ಮ ಬಳಿ ಇರುವ ಖಾತೆಗಳಲ್ಲಿ ಒಂದನ್ನು ನೀಡುವುದಾಗಿ ಅಬಕಾರಿ ಸಚಿವರಿಗೆ ವಾಗ್ದಾನ ನೀಡಿದರು ಎಂದು ಮೂಲಗಳು ತಿಳಿಸಿವೆ.
ಮೊದಲಿನಂತಿಲ್ಲ ಎಂಬ ಕೊರಗು: ಸಿದ್ದರಾಮಯ್ಯ ಅವರು ಮೊದಲಿನಂತೆ ತಮ್ಮ ಜೊತೆ ನಡೆದುಕೊಳ್ಳುತ್ತಿಲ್ಲ ಎಂಬ ಬೇಸರವನ್ನು ಸತೀಶ್ ಜಾರಕಿಹೊಳಿ ಅವರು ಮಾತುಕತೆ ವೇಳೆ ಹೊರಹಾಕಿದ್ದಾರೆ. ತಾವು ಭೇಟಿಗಾಗಿ ಬಂದರೂ ಸಾಧ್ಯ ಆಗುತ್ತಿಲ್ಲ. ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ನೇರವಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.
‘ಮೊದಲು ನೀವು ಹೀಗೆ ಇರಲಿಲ್ಲ. ಮುಖ್ಯಮಂತ್ರಿಯಾಗುವ ಮೊದಲು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದುದಕ್ಕೂ ಈಗ ಇರುವುದಕ್ಕೂ ಬಹಳ ವ್ಯತ್ಯಾಸ ಕಾಣುತ್ತಿದೆ. ಇದರಿಂದಾಗಿ ನನಗೆ ನೋವಾಗಿದೆ’ ಎಂದು ಸತೀಶ್ ಹೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ನಾನು ಈಗ ಮುಖ್ಯಮಂತ್ರಿ. ಮೊದಲಿನಂತೆ ಇರುವುದಕ್ಕೆ ಸಾಧ್ಯ ಆಗುವುದಿಲ್ಲ. ಯಾವುದೇ ಸಮಯದಲ್ಲಿ ನನ್ನೊಂದಿಗೆ ಮಾತನಾಡುವುದಕ್ಕೆ ನಿಮಗೆ ಮುಕ್ತ ಅವಕಾಶ ಇದೆ. ನೀವಾಗಿಯೇ ಬಂದು ಮಾತನಾಡಿ. ಯಾವತ್ತಿಗೂ ನಿಮ್ಮನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.