ಲಖನೌ: ಉತ್ತರ ಪ್ರದೇಶದಲ್ಲಿ 2 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಉಷ್ಣಾಂಶದ ಶೀತಗಾಳಿ ಬೀಸುತ್ತಿದ್ದು, ಚಳಿಯ ಕಾರಣ ಸಾವಿಗೀಡಾದವರ ಸಂಖ್ಯೆ 50ಕ್ಕೆ ಏರಿದೆ. ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಲಾಗಿದ್ದು, ಕಾನ್ಪುರ, ಮಹೋಬ, ಬಂಡಾ, ಔರೈಯಾ, ಉನಾವೊ ಮತ್ತು ಚಿತ್ರಕೂಟ ಜಿಲ್ಲೆಗಳಲ್ಲಿ ಕಳೆದ 24 ಗಂಟೆಯಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ.
ಲಖನೌದಿಂದ 400 ಕಿ.ಮೀ ದೂರದಲ್ಲಿರುವ ನಾಜಿಯಾಬಾದ್ನಲ್ಲಿ 1.5 ಡಿಗ್ರಿಯ ಅತಿ ಕಡಿಮೆ ಉಷ್ಣಾಂಶ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಅತಿ ಚಳಿ ಬೀಳುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಕಳೆದ 10 ವರ್ಷಗಳಲ್ಲೇ ಅತಿ ಕಡಿಮೆ ಉಷ್ಣತೆ ದಾಖಲಾಗಿದೆ.
ಮಂಜು ಕವಿದ ವಾತಾವರಣದಿಂದಾಗಿ ರೈಲು ಮತ್ತು ವಿಮಾನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ರಾಜ್ಯದಲ್ಲಿ ಶೀತ ಮತ್ತು ಮಸುಕಿನ ವಾತಾವರಣ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕುಸಿದ ತಾಪಮಾನ: ತತ್ತರಿಸಿದ ತೆಲಂಗಾಣ
ಹೈದರಾಬಾದ್: ಬಿರು ಬಿಸಿಲಿನ ನಾಡು ತೆಲಂಗಾಣ ಶೀತಗಾಳಿ ಹಾಗೂ ಚಳಿಯಿಂದ ತತ್ತರಿಸಿದ್ದು, ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ಕುಸಿದಿದೆ.