ನವದೆಹಲಿ (ಪಿಟಿಐ): ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ದೇಶೀಯ ಟರ್ಮಿನಲ್ಗೆ ತೆಲುಗುದೇಶಂ ಸಂಸ್ಥಾಪಕ ಹಾಗೂ ತೆಲುಗು ಚಿತ್ರರಂಗದ ಮೇರುನಟ ದಿವಂಗತ ಎನ್.ಟಿ. ರಾಮರಾವ್ ಹೆಸರಿಡಲು ಹೊರಟಿರುವ ಕೇಂದ್ರದ ನಿರ್ಧಾರ ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಸದ್ದು ಮಾಡಿತು.
ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾರಿ ಪ್ರತಿಭಟನೆ ನಡೆಸಿದರು. ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಉಪ ನಾಯಕ ಆನಂದ ಶರ್ಮಾ, ಮರು ನಾಮಕರಣ ಮಾಡುವ ಕುರಿತು ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ ಎಂದು ತರಾಟೆಗೆ ತೆಗೆದುಕೊಂಡರು.
ನಂತರ ಕಾಂಗ್ರೆಸ್ ಸಂಸದರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸಭಾಧ್ಯಕ್ಷರ ಪೀಠ ಎದುರು ಪ್ರತಿಭಟನೆಗೆ ಇಳಿದರು. ಉಪಸಭಾಧ್ಯಕ್ಷ ಪಿ.ಜೆ. ಕುರಿಯನ್ ಅವರ ಮನವಿಗೂ ಸದಸ್ಯರು ಕಿವಿಗೊಡದ ಕಾರಣ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.
ಮಧ್ಯಾಹ್ನ ಕಲಾಪ ಆರಂಭವಾದಾಗ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಪುಟದ ಹೊಸ ಸದಸ್ಯರನ್ನು ಸದನಕ್ಕೆ ಪರಿಚಯಿಸಲು ಮುಂದಾದರು. ಆದರೆ, ಕಾಂಗ್ರೆಸ್ ಸದಸ್ಯರು ಇದಕ್ಕೆ ಅವಕಾಶ ನೀಡದ ಕಾರಣ ಕಲಾಪವನ್ನು ಮತ್ತೆ ಮುಂದೂಡಲಾಯಿತು.
ಲೋಕಸಭೆಯಲ್ಲೂ ವಿಮಾನ ನಿಲ್ದಾಣ ಮರು ನಾಮಕರಣ ವಿವಾದ ಪ್ರತಿಧ್ವನಿಸಿತು.