ಔರಾದ್: ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಬಾರದಿರುವುದರಿಂದ ಬುಧವಾರ ಇಲ್ಲಿ ನಡೆಯಬೇಕಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ರದ್ದಾಗಿದೆ.
ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕೆಲ ಮಹತ್ವದ ವಿಷಯ ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಸದಸ್ಯರು ಗೈರು ಹಾಜರಾಗುವ ಮೂಲಕ ಅಧ್ಯಕ್ಷ ವಿನಾಯಕ ಜಗದಾಳೆ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ. ಸಭೆ ಆರಂಭದ ವೇಳೆ ಕೆಲ ಸದಸ್ಯರು ಸಭಾಂಗಣದ ಪಕ್ಕದ ಕೊಠಡಿಯಲ್ಲಿದ್ದರೆ ಮತ್ತೆ ಕೆಲವರು ಹೊರಗಡೆ ಇದ್ದರು.
ಸಭೆಯ ನಿಗದಿತ ಅವಧಿಗಿಂತ ಅರ್ಧ ಗಂಟೆ ಸಮಯ ಮೀರಿದರೂ ಯಾವೊಬ್ಬ ಸದಸ್ಯರು ಸಭಾಂಗಣಕ್ಕೆ ಬಾರದೆ ಇರುವುದರಿಂದ ಕಾರ್ಯ ನಿರ್ವಹಣಾಧಿಕಾರಿ ಜಗನ್ನಾಥರೆಡ್ಡಿ ಸಭೆ ಮುಂದೂಡಿದರು. ಎಲ್ಲ ಸದಸ್ಯರ ಗಮನಕ್ಕೆ ತಂದು ಸಭೆ ನಿಗದಿ ಮಾಡಲಾಗಿದೆ.
ಆದರೆ, ಅವರು ಯಾವ ಕಾರಣಕ್ಕಾಗಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಾಳೆ ಹುಣ್ಣಿಮೆ ಇದ್ದ ಕಾರಣಕ್ಕೆ ಬರಲಿಕ್ಕಿಲ್ಲ ಎಂದು ಅಧ್ಯಕ್ಷ ವಿನಾಯಕ ಜಗದಾಳೆ ಸಮಾಧಾನ ಮಾಡಿಕೊಂಡರು.
ನಮಗೆ ಸಭೆಗೆ ಬರಲು ಸ್ವಲ್ಪ ವಿಳಂಬವಾಗಿದೆ. ಆದರೆ, ಅಧ್ಯಕ್ಷರು ಸಮಯ ಕೇಳದೆ ಸಭೆ ಮುಂದೂಡಿದ್ದಾರೆ. ಅದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಸದಸ್ಯ ಶ್ರೀರಂಗ ಪರಿಹಾರ ಹೇಳಿದರು. ಕಾರ್ಯನಿರ್ವಾಹಣಾಧಿಕಾರಿಗಳು ನಮಗೆ ಸಮಯ ಕೇಳಲು ಅವಕಾಶವೇ ನೀಡಿಲ್ಲ ಎಂದು ಅಧ್ಯಕ್ಷ ವಿನಾಯಕ ಜಗದಾಳೆ ಸಮರ್ಥಿಸಿಕೊಂಡರು.