ಚನ್ನಪಟ್ಟಣ: ಸಾಮಾನ್ಯ ಸಭೆಗಳಿಗೆ ಅಧಿಕಾರಿಗಳು ಗೈರು ಹಾಜ ರಾಗುತ್ತಿರುವುದು ಹಾಗೂ ಸಭೆಯ ನಿರ್ಣಯಗಳನ್ನು ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿ ನಗರಸಭೆಯ ಜೆಡಿಎಸ್ ಸದಸ್ಯರು ಸಭೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಘಟನೆ ಗುರುವಾರ ನಡೆಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಪ್ರತಿ ಸಾಮಾನ್ಯ ಸಭೆಗಳಲ್ಲಿಯೂ ನಗರಸಭೆ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗೈರಾಗುತ್ತಿದ್ದಾರೆ. ನಗರಸಭೆ ಅಧಿ ಕಾರಿಗಳು ಅವರಿಗೆ ನೋಟೀಸ್ ನೀಡುತ್ತಿದ್ದಾರೆಯೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ, ಸಮಸ್ಯೆ ಪರಿಹಾರವಾಗದಿದ್ದರೆ ಸಭೆ ನಡೆಸಿ ಏನು ಪ್ರಯೋಜನ ಎಂದು ಸದಸ್ಯರಾದ ಉಮಾ ಶಂಕರ್, ಲೋಕೇಶ್, ವಿಷಕಂಠಮೂರ್ತ, ಹಮೀದ್ ಮುನಾವರ್ ಆರೋಪಿಸಿ ಧರಣಿ ನಡೆಸಿದರು.
ಪ್ರತಿ ಸಾಮಾನ್ಯ ಸಭೆ ನಡೆದಾಗಲೂ ಕೆಲವು ನಿರ್ಣಯಗಳನ್ನು ಕೈಗೊಳ್ಳ ಲಾಗುತ್ತಿದೆ. ಆದರೆ ಅವು ಅನುಷ್ಟಾನಕ್ಕೆ ಬರುತ್ತಿಲ್ಲ. ರಸ್ತೆ ಬದಿ ವ್ಯಾಪಾರ, ಪ್ಲಾಸ್ಟಿಕ್ ನಿಯಂತ್ರಣ, ಕಸ ವಿಲೇವಾರಿ, ಸರ್ಕಾರಿ ಜಾಗಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಂಡರೂ ಕೇವಲ ಅವು ನಡವಳಿ ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ. ಅವುಗಳನ್ನು ಅನುಷ್ಟಾನ ಗೊಳಿಸಲು ಅಧಿಕಾರಿಗಳು ಹಾಗೂ ಆಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಸಭೆಗೆ ಅಧಿಕಾರಿಗಳು ಬರಬೇಕು. ನಿರ್ಣಯಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಧರಣಿನಿರತರು ಪಟ್ಟುಹಿಡಿದರು. ಅವರನ್ನು ಸಮಾಧಾನ ಪಡಿಸಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಪ್ರಯತ್ನಿಸಿದರು ಅದು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಅರ್ಧ ಗಂಟೆ ಸಭೆಯನ್ನು ಮುಂದೂಡಿ ಧರಣಿ ನಿರತರನ್ನು ಸಮಾಧಾನಪಡಿಸಲು ಅಧ್ಯಕ್ಷರು ಮುಂದಾದರು. ನಂತರ ಪೌರಾಯುಕ್ತ ಡಾ.ಆನಂದ್ ಸಭೆ ನಡೆಸಲು ಪ್ರಯತ್ನಿಸಿದರು. ಆದರೆ ಧರಣಿನಿರತರು ಇಲಾಖೆ ಅಧಿಕಾರಿಗಳನ್ನು ಕರೆಸಿ ನಂತರ ಸಭೆ ನಡೆಸಬೇಕು ಎಂದು ಪಟ್ಟು ಹಿಡಿದ ಕಾರಣ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಧರಣಿ ನಡೆಸುವ ವೇಳೆಯಲ್ಲಿಯೆ ಕೆಲವು ಸದಸ್ಯರು ಬೆಸ್ಕಾಂ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತಿದ್ದುದ್ದನ್ನು ಕಂಡು ಸದಸ್ಯ ಉಮಾಶಂಕರ್ ಆಕ್ರೋಶ ವ್ಯಕ್ತ ಪಡಿಸಿದರು. ಇಲ್ಲಿ ಧರಣಿ ನಡೆಸುತ್ತಿದ್ದರೂ ಲೆಕ್ಕಿಸದೆ ಸಭೆ ನಡೆಸುತ್ತಿರುವುದು ಖಂಡನೀಯ ಎಂದರು. ನಂತರ ಸಭೆಯನ್ನು ಮುಂದೂಡಲಾಯಿತು. ಅಧ್ಯಕ್ಷೆ ಶ್ವೇತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಲಿಯಾಖತ್, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.