ರಾಜ್ಯದಲ್ಲಿ 1996ರಲ್ಲಿ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಗಳಾಗಿ, ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿಗಳಾಗಿದ್ದಾಗ (ಇಬ್ಬರೂ ಲೋಹಿಯಾವಾದಿಗಳು) ರಾಮ ಮನೋಹರ ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡಕ್ಕೆ ತರುವ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿ ಈ ಕಾರ್ಯಕ್ಕಾಗಿ ಪ್ರಕಟಣಾ ಸಮಿತಿಯೊಂದನ್ನು ರಚಿಸಲಾಗಿತ್ತು.
ಈ ವಿದ್ವಾಂಸರ ಸಮಿತಿ ಅಸ್ತಿತ್ವಕ್ಕೆ ಬಂದು 18 ವರ್ಷಗಳೇ ಆಗಿ ಹೋಗಿವೆ! ಈ ಅವಧಿಯಲ್ಲಿ ಸಮಿತಿಯು ಲೋಹಿಯಾ ಅವರ ಏಳೆಂಟು ಸಂಪುಟಗಳನ್ನು ಮಾತ್ರ ಅನುವಾದಿಸಿ, ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಈ ನಡುವೆ ಸರ್ಕಾರ ಬದಲಾಯಿತು. ಸಮಿತಿಯಲ್ಲಿರುವ ಅಧ್ಯಕ್ಷರು ಮತ್ತು ಸದಸ್ಯರ ಆಮೆಗತಿ ವೇಗವೂ ಈ ನಿಧಾನಕ್ಕೆ ಕಾರಣವಾಗಿರಬಹುದು! ಅಥವಾ ಸದಸ್ಯರ ನಡುವೆ ಹೊಂದಾಣಿಕೆ, ಮುಖ್ಯವಾಗಿ ಬದ್ಧತೆಯ ಕೊರತೆ ಇರಬಹುದು! ಈ ಸಮಿತಿಯಲ್ಲಿರುವ ವಿದ್ವಾಂಸರಿಗೇ ಈ ಯೋಜನೆ ಮರೆತು ಹೋಗಿರಬಹುದು! ಏನೇ ಇರಲಿ, ಈಗ ಇದೆ ಎಂದು ಭಾವಿಸಿರುವ ಪ್ರಕಟಣಾ ಸಮಿತಿಯು ಲೋಹಿಯಾ ಅವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ತರಲು ಅಸಮರ್ಥವಾಗಿದೆ.
ಹಾಗೆಯೇ ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಾಬು ಜಗಜೀವನರಾಮ್ ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನು ಕನ್ನಡಕ್ಕೆ ತರಲು ಪ್ರಕಟಣಾ ಸಮಿತಿ ರಚನೆ ಮಾಡಿದ್ದರು. ಈ ಸಮಿತಿಯು ‘ವಿಮೋಚನೆಯ ಹರಿಕಾರ’ ಎನ್ನುವ ಬಾಬು ಜಗಜೀವನರಾಮ್ ಅವರ ಜೀವನ ಮತ್ತು ಸಾಧನೆ ಕುರಿತ ಪ್ರಾತಿನಿಧಿಕ ಬರಹಗಳ ಪ್ರಾಯೋಗಿಕ ಸಂಪುಟ ಮಾತ್ರ ಪ್ರಕಟಿಸಿ ಕೈತೊಳೆದುಕೊಂಡಿದೆ. ಈ ಪ್ರಕಟಣಾ ಸಮಿತಿ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ! ಅಥವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಆಸಕ್ತಿ ಇದೆಯೋ ಇಲ್ಲವೋ! ಕನ್ನಡದ ಪ್ರಖ್ಯಾತ ವಿದ್ವಾಂಸರೇ ಇದ್ದ ಈ ಎರಡು ಪ್ರಕಟಣಾ ಸಮಿತಿಗಳು ನಿಷ್ಕ್ರಿಯವಾಗಿವೆ.
ಆದ್ದರಿಂದ ಮರೆತು ಹೋಗಿರುವ ಈ ಎರಡು ಯೋಜನೆಗಳನ್ನು ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ’ ವಹಿಸಿಕೊಟ್ಟು ಆದಷ್ಟು ಬೇಗ ಲೋಹಿಯಾ ಮತ್ತು ಜಗಜೀವನರಾಮ್ ಅವರ ಸಮಗ್ರ ಬರಹ ಮತ್ತು ಭಾಷಣಗಳ ಸಂಪುಟಗಳು ಹೊರ ಬರುವಂತೆ ಕ್ರಮ ಕೈಗೊಳ್ಳಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.