ಭಗವದ್ಗೀತೆ ಭರತಖಂಡದ (ಏಕೈಕ) ಧರ್ಮಗ್ರಂಥವಾಗಬೇಕೆಂಬ ಹೇಳಿಕೆಯಲ್ಲಿ ತಪ್ಪೇನಿದೆ? ಹಾಗೆಂದರೆ, ಕುರಾನ್, ಬೈಬಲ್ ಮುಂತಾದವುಗಳಿಗೂ ಆ ಸ್ಥಾನ ಸಿಗಬೇಕೆಂಬ ವಾದ ಏಳಬಹುದು, ನಿಜ. ಆದರೆ ನಾವು ನೆನಪಿಡಬೇಕು: ಅವುಗಳಿಗೆ ಬೇರೆ ಬೇರೆ ದೇಶಗಳಿವೆ, ಗೀತೆಗಿಲ್ಲ! (ಅನ್ಯದೇಶಗಳಿಗೂ ಗೀತಾ ವಿಚಾರಗಳು ಅನುಸರಣೀಯ).
ಆದ್ದರಿಂದ, ಗೀತೆ ಭಾರತಕ್ಕೆ ಅತ್ಯಗತ್ಯವಾದ, ಶ್ರೇಯಸ್ಕರವಾದ ಗ್ರಂಥ; ಹಿಂದೂಧರ್ಮದ–ವೈದಿಕ ಧರ್ಮವಲ್ಲ– ಪ್ರಮಾಣಗ್ರಂಥ. ‘ಸಮಸ್ತ ವೇದಾರ್ಥ ಸಾರಸಂಗ್ರಹಭೂತಂ’ ಎಂಬುದು ಗೀತೆಯನ್ನು ಕುರಿತ ಶಂಕರಭಗವತ್ಪಾದರ ಉಕ್ತಿ; ಅದಕ್ಕೇ ಪೂರಕವಾಗಿ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಉಪನಿಷತ್ತುಗಳ ವ್ಯಾಖ್ಯಾನ ಗೀತೆ; ಉಪನಿಷತ್ತುಗಳು ಭಾರತದ ಬೈಬಲ್’.
ಗೀತೆಯ ಬಗೆಗಿನ ಕೆಲವು ಆರೋಪಗಳನ್ನು ಗಮನಿಸಬಹುದು: ಅದು ಯುದ್ಧವನ್ನು– ಹಿಂಸೆಯನ್ನು– ಬೋಧಿಸುತ್ತದೆ ಎಂಬುದೊಂದು. ವಾಸ್ತವವಾಗಿ, ಯುದ್ಧ ವಿರೋಧಿ ನೆಲೆಯಲ್ಲೆ ಗೀತೆಯ ಅಸ್ತಿತ್ವ; ಪ್ರಥಮಾಧ್ಯಾಯವನ್ನು ಬಿಟ್ಟರೆ ಗೀತೆಯಲ್ಲಿ ಮತ್ತೆಲ್ಲಿಯೂ ಯುದ್ಧ ಪ್ರಸಕ್ತಿಯಿಲ್ಲ! ಗೀತಾ ಪ್ರಾರಂಭವೆ ಕುತೂಹಲಕರ: ‘ಧರ್ಮಕ್ಷೇತ್ರೇ ಕುರುಕ್ಷೇತ್ರೇ...’ ಮಹಾಭಾರತ ಮಧ್ಯದಲ್ಲಿ, ‘ಧರ್ಮಕ್ಷೇತ್ರ’ವೂ ಆದ ‘ಕುರು’ಕ್ಷೇತ್ರದಲ್ಲಿ ಕರ್ತವ್ಯಬೋಧೆ ಮಾಡುವುದು ಗೀತೆಯ ಮುಖ್ಯೋದ್ದೇಶ (‘ಗೀತಾ ಸುಗೀತಾ ಕರ್ತವ್ಯಾ’). ಕುರುಕ್ಷೇತ್ರವೊಂದು ಪ್ರತಿಮೆ; ಯುದ್ಧ, ಜೀವನಸಂಗ್ರಾಮದ ಸಂಕೇತ.
ರಣರಂಗ ಹೊರಗಿನದು ಮಾತ್ರವಲ್ಲ, ಒಳಗಿನದೂ ಹೌದು: ಅಂತರಂಗ ವೈರಿಗಳನ್ನು ಇಂದ್ರಿಯಗಳನ್ನು ನಿರ್ದಯವಾಗಿ ದಮನ ಮಾಡಬೇಕು ಎಂತಲೇ, ‘ಯುದ್ಧಾಯ ಯುಜ್ಯಸ್ವ’ (ಯುದ್ಧಕ್ಕೆ ಸಿದ್ಧನಾಗು), ‘ಜಹಿಶತ್ರುಂ’ (ಶತ್ರುವನ್ನು ಕೊಲ್ಲು) ಎನ್ನುತ್ತಾನೆ ಕೃಷ್ಣ, ಅರ್ಜುನನಿಗೆ. ಮತ್ತೊಂದು ಮುಖ್ಯಾಂಶ: ‘ಕೌರವರನ್ನು ನಾನಾಗಲೆ ಕೊಂದಿದ್ದೇನೆ; ನೀನು ನೆಪ ಮಾತ್ರವಾಗಿರು’ (ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್) ಎಂಬುದೂ ಕೃಷ್ಣನ ಮಾತು. ಎಂದಮೇಲೆ, ಕೊಲೆಯ ಪ್ರಶ್ನೆ ಎಲ್ಲಿ ಬಂತು?
ತನಗೆ ಪ್ರಿಯರಾದವರ ಬಗೆಗೆ ಹೇಳುವಾಗ ಕೃಷ್ಣನ ಬಾಯಲ್ಲಿ ಬರುತ್ತದೆ, ಈ ಕಲ್ಯಾಣ ಗುಣಗಳ ಪಟ್ಟಿ:
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ
ನಿರ್ಮಮೋ ನಿರಹಂಕಾರಃ ಸಮದುಃಖ ಸುಖಃ ಕ್ಷಮೀ...(12:13)
(ಯಾವ ಜೀವಿಗಳನ್ನೂ ದ್ವೇಷಿಸದವನು, ಮಿತ್ರಭಾವದಿಂದ ಕೂಡಿರುವವನು, ಕರುಣೆಯುಳ್ಳವನು, ಮಮಕಾರ ಅಹಂಕಾರಗಳಿಲ್ಲದವನು, ಸುಖದುಃಖಗಳಲ್ಲಿ ಸಮಾನನಾಗಿರುವವನು, ಕ್ಷಮಾಶೀಲನು....). ಈ ಗುಣಗಳು ಯಾರಿಗೆ ಬೇಡ? ಎಲ್ಲ ಧರ್ಮಗಳ ತಿರುಳೂ ಇದೇ ತಾನೆ?
ಇನ್ನು, ವರ್ಣವ್ಯವಸ್ಥೆಯನ್ನು ಕುರಿತ ಗೀತೆಯ ವಿಚಾರಗಳು ಬಹುಮುಖ್ಯ. ಗೀತೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸುತ್ತದೆ ಎಂಬುದು ದೊಡ್ಡ ಆರೋಪ.
ನಿಜವೆ? ‘ವರ್ಣ’ ಬೇರೆ, ಈಗ ಹುಟ್ಟಿನಿಂದ ನಿರ್ಧರಿತವಾಗುವ ‘ಜಾತಿ’ ಬೇರೆ ಎಂಬುದನ್ನು ಲಕ್ಷಿಸಬೇಕು. ಗೀತೆಯ ಈ ಉಕ್ತಿ ಪ್ರಸಿದ್ಧ ಮತ್ತು ಬಹುಚರ್ಚಿತ: ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ (ಗುಣ, ಕರ್ಮ–ವೃತ್ತಿ–ಗಳಿಗೆ ಅನುಗುಣವಾಗಿ ನಾನು ನಾಲ್ಕು ವರ್ಣಗಳನ್ನು ಸೃಜಿಸಿದೆ). ‘ಜಗದ್ಗುರು’ ಕೃಷ್ಣನ ‘ವರ್ಣ’ ವ್ಯವಸ್ಥೆ ಇಡೀ ಜಗತ್ತಿಗೆ ಅನ್ವಯಿಸುವಂಥದು; ಕೇವಲ ಭಾರತಕ್ಕಲ್ಲ ಎಂಬುದನ್ನು ಗಮನಿಸಬೇಕು.
ಇಲ್ಲಿನ ನಾಲ್ಕು ‘ವರ್ಣ’ಗಳಿಗೆ ಸಂವಾದಿಯಾದ ನಾಲ್ಕು ಸಮುದಾಯಗಳು ಪ್ರಪಂಚದಲ್ಲಿ ಎಲ್ಲೆಡೆ ಉಂಟಲ್ಲವೆ? (ಹಾಗೆ ಕೃಷ್ಣನ ಏರ್ಪಾಟು ಭಾರತಕ್ಕೆ ಸೀಮಿತವಾಗಿದ್ದಲ್ಲಿ, ಅವನು, ಕುವೆಂಪು ಒಮ್ಮೆ ನನ್ನೊಡನೆ ಮಾತನಾಡುತ್ತ ಹೇಳಿದಂತೆ, ವಿಶ್ವಮಾನವನಾಗದೆ ಒಬ್ಬ ಕ್ಷುದ್ರ ಜಾತಿ ಮಾನವನಾಗುತ್ತಾನೆ. ವಸ್ತುತಃ ಅವನದು ‘ವಿಶ್ವರೂಪ!’ ಅಂತೂ ಜನ್ಮ ಮೂಲವಾದ ಜಾತಿಪದ್ಧತಿ ಗೀತೆಯ ಆಶಯಕ್ಕೆ ಹೊರಗು!
‘ಸ್ವಧರ್ಮೇ ನಿಧನಂ ಶ್ರೇಯಃ....’ ಎಂಬ ಗೀತೋಕ್ತಿಯಲ್ಲಿ ಬರುವ ‘ಸ್ವಧರ್ಮ’ ಎಂಬುದನ್ನು ‘ಜಾತಿ’ ಎಂದು ಹಲವರು ಅರ್ಥೈಸಿರುವುದು ಅನುಚಿತ. ‘ಸ್ವಧರ್ಮ’ ಎಂಬುದು ಆಯಾ ವ್ಯಕ್ತಿಯ ಮನೋಧರ್ಮಕ್ಕೆ, ಸಹಜ ಪ್ರವೃತ್ತಿಗೆ ಸಂಬಂಧಿಸಿದ್ದು. (ನಿದರ್ಶನಕ್ಕೆ, ಬರವಣಿಗೆ ಸಾಹಿತಿಯ ಸ್ವಧರ್ಮ. ಅದನ್ನವನು ಬಿಟ್ಟು, ತರಕಾರಿ ಮಾರಾಟಕ್ಕೆ ಹೊರಟರೆ, ಇತ್ತ ಬರವಣಿಗೆಯೂ ಹಾಳು, ಅತ್ತ ಮಾರಾಟವೂ ಅಧ್ವಾನ!).
‘ಕರ್ಮಣ್ಯೇವಾಧಿಕಾರಸ್ತೆ, ಮಾಫಲೇಷು ಕದಾಚನ’ (ಕರ್ಮದಲ್ಲಿ ನಿನಗೆ ಅಧಿಕಾರ ಎಂದರೆ ಕರ್ತವ್ಯ, ಫಲದಲ್ಲಲ್ಲ) ಎಂಬ ಗೀತಾಬೋಧೆಗೂ ವಿಪರೀತಾರ್ಥ ಕಲ್ಪಿಸಲಾಗಿದೆ. ವ್ಯಕ್ತಿ ನಿರ್ಲಿಪ್ತವಾಗಿ, ಸಮರ್ಪಕವಾಗಿ ಕರ್ಮವೆಸಗಿದರೆ ಫಲ ಸಿಕ್ಕಿಯೇ ಸಿಗುತ್ತದೆ; ಫಲವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಕೆಲಸ ಮಾಡಿದರೆ, ಕೆಲಸವೂ ಕೆಡಬಹುದು, ಫಲವೂ ಸಿಗದಿರಬಹುದು! ‘ಸಮದರ್ಶನ’ (ಸಮರ ದರ್ಶನವಲ್ಲ!) ಗೀತೋಪದೇಶದ ಒಂದು ಮಹಾವೈಶಿಷ್ಟ್ಯ; ಪ್ರಜಾಪ್ರಭುತ್ವದ ಒಂದು ಪ್ರಶಸ್ತ ತತ್ತ್ವವಾದ ಸಮಾನತೆ ಇಲ್ಲಿ ಉಕ್ತವಾಗಿರುವುದು ಬಹು ಗಮನಾರ್ಹ:
ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನೀ,
ಶುನಿ ಚೈವ ಶ್ವಪಾಕೇ ಚ ಪಂಡಿತಾಸ್ಸಮದರ್ಶಿನಃ (5:18)
(ವಿದ್ಯಾ ವಿನಯಗಳಿಂದ ಕೂಡಿದವನು, ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿಮಾಂಸವನ್ನು ತಿನ್ನುವ ಚಂಡಾಲ– ಇವರೆಲ್ಲರಲ್ಲಿಯೂ ಜ್ಞಾನಿಗಳು ಸಮದರ್ಶಿಗಳಾಗಿರುವರು) ಇಲ್ಲಿ ಅದ್ವೈತದ ನಿಲುವಿದೆ ಮಾತ್ರವಲ್ಲ, ವರ್ಣತಾರತಮ್ಯರಹಿತವಾದ ಸಾಮಾಜಿಕ ಸಮಾನತೆಯ ಪ್ರತಿಪಾದನೆಯೂ ಇದೆ.
‘ಸಮ್ಮೋಹಂ ಸರ್ವಭೂತೇಷು’ (ಎಲ್ಲ ಜೀವಿಗಳಲ್ಲೂ ನಾನು ಸಮದೃಷ್ಟಿಯುಳ್ಳವನು) ಎಂದೂ ಹೇಳುತ್ತಾನೆ, ಗೀತಾಚಾರ್ಯ. ಸಮತ್ವಸಂಬಂಧವಾದ ಇನ್ನೂ ಅನೇಕ ಶ್ಲೋಕಗಳಿವೆ, ಗೀತೆಯಲ್ಲಿ. ಕೃಷ್ಣ ಸ್ತ್ರೀಯರ ಬಗೆಗೆ ಗೀತೆಯಲ್ಲಿ ನೇರವಾಗಿ ಏನನ್ನೂ ಹೇಳದಿದ್ದರೂ, ವೈಯಕ್ತಿಕ ಜೀವನದಲ್ಲಿ ಅವನೊಬ್ಬ ಸ್ತ್ರೀವಾದಿ (ಸ್ತ್ರೀಲೋಲ ಎಂಬುದು ಅಪಪ್ರಥೆ!). ಅವನು ದ್ರೌಪದಿಯ ಮಾನ ಕಾಪಾಡಿದವನು; ನರಕಾಸುರನನ್ನು ವಧಿಸಿ, ಅವನ ಸೆರೆಯಿಂದ ಸಾವಿರಾರು ಸ್ತ್ರೀಯರನ್ನು ಪಾರುಮಾಡಿದವನು.
ಆಧುನಿಕ ಯುಗದಲ್ಲಿ ವಿದ್ಯೆ, ಜ್ಞಾನಗಳು ಎಲ್ಲರಿಗೂ ಅಮೂಲ್ಯ, ಅನಿವಾರ್ಯ. ಅದನ್ನು ಕುರಿತ ಗೀತೋಕ್ತಿ ಸುಪರಿಚಿತ: ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ (ಜ್ಞಾನದಷ್ಟು ಪವಿತ್ರವಾದುದು ಲೋಕದಲ್ಲಿ ಯಾವುದೂ ಇಲ್ಲ). ಪ್ರಣಿಪಾತ (ನಮಸ್ಕಾರ), ಸೇವೆಗಳ ಜೊತೆಗೆ ‘ಪರಿಪ್ರಶ್ನೆ’ಯನ್ನೂ ವಿಧಿಸಿದೆ, ಗೀತೆ. ಪರಿಪ್ರಶ್ನೆಯಿಂದ ಜ್ಞಾನ ಲಭಿಸುತ್ತದೆ ಮತ್ತು ಬೆಳೆಯುತ್ತದೆ. ಇಲ್ಲಿ ವೈಚಾರಿಕತೆಗೆ, ‘ನಿರಂಕುಶಮತಿ’ಗೆ ಗೀತೆ ಕೊಟ್ಟಿರುವ ಪ್ರಾಧಾನ್ಯ ಸುಸ್ಪಷ್ಟ.
ವಿಚಾರ ಸ್ವಾತಂತ್ರ್ಯ, ಕಾರ್ಯಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳು; ಅವು ಕೃಷ್ಣನ ಈ ಕಡೆಯ ಮಾತಿನಲ್ಲಿ ಸುವಿದಿತ: ‘ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ, ಹೇಗೆ ಇಚ್ಛಿಸುವೆಯೋ ಹಾಗೆ ಮಾಡು’. (ನಾವಿಂದು ಗೌರವಿಸುವ ಕುವೆಂಪು ಕೂಡ ಒಂದೆಡೆ ಹೇಳುವುದು ಇದಕ್ಕೇ ಪೂರಕವಾಗಿದೆ: ‘ತಾಳ್ಮೆಯಿಂದ ಆಲಿಸಿ, ವಿವೇಕದಿಂದ ಭಾವಿಸಿ, ವಿಮರ್ಶ ಬುದ್ಧಿಯಿಂದ ಪರೀಕ್ಷಿಸಿ, ಒಪ್ಪಿಗೆಯಾದನ್ನು ಸ್ವೀಕರಿಸಿ...’). ಇದನ್ನೆಲ್ಲ ‘ವಿಚಾರವಾದಿ’ ಗಳೆನಿಸಿದ ‘ಸಂಶಯಾತ್ಮ’ರು ಮನಗಾಣ ಬೇಕಲ್ಲವೆ?
ಪ್ರಪಂಚದ ಮತ್ತಾವ ಧರ್ಮಗ್ರಂಥದಲ್ಲೂ ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಎಲ್ಲಿಯೂ ಬಲಾತ್ಕಾರ ಸಲ್ಲದು; ಅದು ಭಯೋತ್ಪಾದನೆಯ ಚಿಹ್ನೆ! ಕೃಷ್ಣ ‘ಭಯಂಕರ’ನಲ್ಲ; ದಯಾಕರ. ಹೀಗೆ ಗೀತೋಪದೇಶ ಅನೇಕ ಮುಖಗಳಲ್ಲಿ ಈ ಹೊತ್ತಿಗೂ ಅತ್ಯಂತ ಪ್ರಸ್ತುತವಾಗಿದೆ; ಗ್ರಾಹ್ಯ ಮತ್ತು ತಾರಕವಾಗಿದೆ. ಕಣ್ತೆರೆದುನೋಡಬೇಕು; ಕೂದಲು ಸೀಳುವುದು ನಿರರ್ಥಕ. ಗೀತಾ ಸಂದೇಶವನ್ನು ಒಪ್ಪುವುದು ಅಥವಾ ಹಟ ಹಿಡಿದು, ಬಿಡುವುದು ಅವರವರಿಗೆ ಸೇರಿದ್ದು: ಕೃಷ್ಣನ ಆಕ್ಷೇಪವಿಲ್ಲ! ‘ನ ಮೇ ಭಕ್ತಃ ಪ್ರಣಶ್ಯತಿ’ (ನನ್ನ ಭಕ್ತನಿಗೆ ನಾಶವಿಲ್ಲ) ಎಂಬುದು ಭಗವದ್ಗೀತೆಯ ಭರವಸೆ; ಯುಗಯಾತ್ರಿಯಾಗಿ ಮೊಳಗಿರತಕ್ಕದ್ದು. ‘ಕೃಷ್ಣಂ ವಂದೇ ಜಗದ್ಗುರುಂ’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.