ಮಂಗಳೂರು: ಸಮನ್ವಯ ಶಿಕ್ಷಣದ ಮೂಲಕ ವಿಶೇಷ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆಯಬೇಕು. ಕಲೋತ್ಸವದಂತಹ ಸಾಂಸ್ಕೃತಿಕ ಹಬ್ಬಗಳು ವಿಶೇಷ ಮಕ್ಕಳ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಮಾಡುತ್ತದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ ಅವರು ತಿಳಿಸಿದರು.
ವಾಮಂಜೂರಿನ ಎಸ್ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶಾಲೆ ಮತ್ತು ಚೈಲ್ಡ್ ಫಂಡ್ ಇಂಡಿಯಾದ ಆಶ್ರಯದಲ್ಲಿ ಮಂಗಳವಾರ ಧರ್ಮಸ್ಥಳದ ದಿವಂಗತ ರತ್ನಮ್ಮ ಹೆಗ್ಗಡೆ ಅವರ ಸ್ಮರಣಾರ್ಥ ವಿಶೇಷ ಮಕ್ಕಳಿಗಾಗಿ ಏರ್ಪಡಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಲೋತ್ಸವ-ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ಅಧಿಕಾರಿ ಕೆ ಶೋಭಂಕರ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದು, ರತ್ನಮ್ಮನವರನ್ನು ಸ್ಮರಿಸಿ, ಅವರಿಗೆ ವಿಶೇಷ ಮಕ್ಕಳ ಹಾಗೂ ಕಷ್ಟದಲ್ಲಿರುವ ಮಕ್ಕಳ ಮೇಲೆ ತುಂಬಾ ಅಕ್ಕರೆ ಇತ್ತು ಎಂದರು. ಸಮಗ್ರ ಶಾಲೆಯ ಕಾರ್ಯದರ್ಶಿ ಪ್ರೊ.ಎ.ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಜಾತ, ಮಂಗಳಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್, ಮಾರ್ಯಟ್ ಮಸ್ಕರೇನಸ್ ವೇದಿಕೆಯಲ್ಲಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈಲ್ಡ್ ಫಂಡ್ ವಿಭಾಗದ ಮುಖ್ಯಸ್ಥ ಪುನೀತ್ ವಂದಿಸಿದರು. ರಮೇಶ್ ಆಚಾರ್ಯ ನಿರೂಪಿಸಿದರು.
ಉಡುಪಿಯ ಸಮಾಜ ಸೇವಕ ಎ.ಪಿ.ಭಟ್ ಅವರು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
10 ವಿಶೇಷ ಶಾಲೆಗಳ 158 ಮಕ್ಕಳು ಸಂಗೀತ, ಚಿತ್ರಕಲೆ, ಛದ್ಮವೇಷ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಿ ಗೌರವಿಸಲಾಯಿತು.