ಹೈದರಾಬಾದ್ (ಐಎಎನ್ಎಸ್ /ಪಿಟಿಐ): ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ತೆಲಂಗಾಣದ ಹತ್ತು ಜಿಲ್ಲೆಗಳಲ್ಲಿ ಮಂಗಳವಾರ ಕೈಗೊಳ್ಳಲಾಗಿದ್ದ ಮನೆ– ಮನೆ ಸಮೀಕ್ಷೆ ಅಭೂತ ಪೂರ್ವ ಯಶಸ್ಸು ಕಂಡಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ ರಾವ್ ಸಮೀಕ್ಷೆ ‘ಸೂಪರ್ ಹಿಟ್’ ಎಂದು ಹೇಳಿದ್ದರೂ ಸಮೀಕ್ಷೆ ನಡೆಸಿದ ವಿಧಾನ ಸಮರ್ಪಕವಾಗಿಲ್ಲ ಎಂದು ಹೈದರಾಬಾದ್, ಸಿಕಂದರಾಬಾದ್ ನಗರಗಳ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನ ಉತ್ಸಾಹದಿಂದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೂ ಕೆಲವರು ಈ ಸಮೀಕ್ಷೆಯ ನಿಖರತೆ, ದತ್ತಾಂಶಗಳ ಉಪಯೋಗದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಸಮೀಕ್ಷೆಯನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ವಿವರಿಸದೇ ಕಾರ್ಯಕರ್ತರನ್ನು ಕಳುಹಿಸಲಾಗಿದೆ ಎಂದು ಹೈದರಾಬಾದ್ನ ಕೆಲ ಬಡಾವಣೆಗಳ ಜನ ದೂರಿದ್ದಾರೆ. ಸಮೀಕ್ಷೆಗೆ ಬರುವವರಿಗೆ ಯಾವ ದಾಖಲೆ ಒದಗಿಸಬೇಕು ಎಂದೂ ಸರ್ಕಾರ ತಿಳಿಸಿಲ್ಲ. ಕೆಲ ಸರ್ಕಾರಿ ನೌಕರರು ತಮಗೆ ವಹಿಸಿದ ಕೆಲಸವನ್ನು ಬೇರೆಯವರಿಗೆ ವಹಿಸಿದ್ದರು. ಮನೆ, ಮನೆಗೆ ಬಂದು ಸಮೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದರೂ ಸಮೀಕ್ಷೆ ನಡೆಸುವವರು ರಸ್ತೆಯ ಒಂದು ಮೂಲೆಯಲ್ಲಿ ಕುಳಿತು ಅಲ್ಲಿಗೆ ಬಂದು ಮಾಹಿತಿ ನೀಡುವಂತೆ ಹೇಳುತ್ತಿದ್ದರು ಎಂದು ಸಿಕಂದರಾಬಾದ್ನ ನಿವಾಸಿಯೊಬ್ಬರು ತಿಳಿಸಿದರು.
ಹೈದರಾಬಾದ್ ನಿರ್ಜನ: ರಾಜಧಾನಿ ಹೈದರಾಬಾದ್ ಸೇರಿದಂತೆ ತೆಲಂಗಾಣದ ಎಲ್ಲಾ ನಗರ– ಪಟ್ಟಣಗಳು ಮಂಗಳವಾರ ಅಕ್ಷರಶಃ ಬಿಕೋ ಎನ್ನುತ್ತಿದ್ದವು. ಎಲ್ಲೆಲ್ಲೂ ಅಘೋಷಿತ ಬಂದ್ ವಾತಾವರಣ ಇತ್ತು.
ಕೇಂದ್ರದ ಜತೆ ಸಂಘರ್ಷಕ್ಕೆ ಎಡೆ?
ನವದೆಹಲಿ (ಪಿಟಿಐ): ತೆಲಂಗಾಣದಲ್ಲಿ ಕೈಗೊಂಡಿರುವ ಮನೆ ಮನೆ ಸಮೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ತಲೆದೋರುವ ಸಾಧ್ಯತೆಗಳಿವೆ. ಗೃಹ ಸಚಿವಾಲಯವು ಇದರಲ್ಲಿ ಮಧ್ಯಪ್ರವೇಶಿಸುವ ಲಕ್ಷಣಗಳಿವೆ.
‘ಈ ಸಮೀಕ್ಷೆಯು ಸೀಮಾಂಧ್ರದ ಜನರಲ್ಲಿ ಶಂಕೆ ಮೂಡಿಸಿದೆ. ಹೀಗಾಗಿ ಈ ಸಮೀಕ್ಷೆಯಿಂದ ತಲೆದೋರಬಹುದಾದ ಪರಿಸ್ಥಿತಿಯ ಬಗ್ಗೆ ಕೇಂದ್ರವು ತೀವ್ರ ನಿಗಾ ಇರಿಸಿದೆ’ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.