ಚಾಮರಾಜನಗರ: ‘ಸಮುದಾಯ ಭವನಗಳು ಶುಭ ಸಮಾರಂಭಗಳಿಗೆ ಬಳಕೆಯಾಗುವ ಮೂಲಕ ಸದಾ ಚಟುವಟಿಕೆಗಳ ಕೇಂದ್ರವಾಗಿರಬೇಕು’ ಎಂದು ಸಂಸದ ಧ್ರುವನಾರಾಯಣ ಸಲಹೆ ನೀಡಿದರು.
ತಾಲ್ಲೂಕಿನ ಭೋಗಾಪುರ ಗ್ರಾಮದ ನಾಯಕರ ಬೀದಿಯಲ್ಲಿ ಇತ್ತೀಚೆಗೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಗ್ರಾಮಾಭಿವೃದ್ಧಿಗೆ ಸಮುದಾಯ ಭವನ ಅತ್ಯಗತ್ಯ. ಮದುವೆ, ಇತರೇ ಶುಭ, ಸಮಾರಂಭ ಹಾಗೂ ಸ್ತ್ರೀಶಕ್ತಿ ಸಂಘಗಳ ಸಭೆ, ಮಕ್ಕಳ ಶೈಕ್ಷಣಿಕ ಚಟುವಟಿಕೆ ನಡೆಸಲು ಭವನದಲ್ಲಿ ಅವಕಾಶವಿದೆ. ಲಭ್ಯವಿರುವ ನಿವೇಶನ ದಲ್ಲಿ ಸುಸಜ್ಜಿತವಾದ ಭವನ ನಿರ್ಮಿಸಿ ಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಭವನ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 5 ಲಕ್ಷ ಅನುದಾನ ನೀಡಲಾಗುವುದು. ಸರ್ಕಾರ ದಿಂದ ₹ 12 ಲಕ್ಷ ಅನುದಾನ ಲಭಿಸ ಲಿದೆ. ಜತೆಗೆ,
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 5 ಲಕ್ಷ ಲಭಿಸಲಿದೆ. ಈ ಅನುದಾನ ಬಳಸಿಕೊಂಡು ಉತ್ತಮ ಭವನ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಗ್ರಾಮದ ನಾಯಕರ ಬೀದಿಯಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಗಿರಿಜನ ಉಪ ಯೋಜನೆಯಡಿ ₹ 10 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ವೀರಶೈವರ ಬೀದಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ₹ 10 ಲಕ್ಷ ಮಂಜೂರಾಗಿದೆ. ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್. ಬಾಲರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀಲಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಸಿ. ರವಿ, ಸದಸ್ಯರಾದ ಶಾಂತಮ್ಮ, ಕುಮಾರಸ್ವಾಮಿ ಇತರರು ಹಾಜರಿದ್ದರು.