ಉಡುಪಿ: ಜಾಗ್ರತೆಯಿಂದ ಇದ್ದರೆ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ದುರಂತಗಳಿಂದಾಗುವ ಬಹುಪಾಲು ನಷ್ಟವನ್ನು ತಡೆಯಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಅಭಿಪ್ರಾಯಪಟ್ಟರು.
‘ಕರಾವಳಿ ಭದ್ರತೆಗಾಗಿ ತಂತ್ರಗಾರಿಕೆ ಯ ಪರಿಗಣನೆ’ ಕರಾವಳಿಯ ಸುರಕ್ಷತೆ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈಯಕ್ತಿಕ ಸುರಕ್ಷತೆಯಿಂದ ಸಮೂಹದ ಸುರಕ್ಷತೆ ಹಾಗೂ ಸಮೂಹದ ಸುರಕ್ಷತೆಯಿಂದ ಜಿಲ್ಲೆಯ ಸುರಕ್ಷತೆಯನ್ನು ಕಾಪಾಡುವುದು ಎಲ್ಲ ನಾಗರಿಕರ ಹೊಣೆಯಾಗಿದೆ. ಸುರಕ್ಷತೆ ಎಂಬುದು ಕೇವಲ ಒಂದು ಇಲಾಖೆಯ ಹೊಣೆ ಎಂದು ಭಾವಿಸದೆ ವಿವಿಧ ಇಲಾಖೆಗಳು ಹಾಗೂ ಮುಖ್ಯವಾಗಿ ವಿದ್ಯಾರ್ಥಿ ಹಾಗೂ ಯುವ ಸಮೂಹ ದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಸಮಗ್ರ ಕಾರ್ಯಪಡೆಯ ರಚನೆ ಇಂದಿನ ಅಗತ್ಯವಾಗಿದೆ. ಆದ್ದರಿಂದ ಇಂತಹ ಕಾರ್ಯಪಡೆಗಳನ್ನು ರಚಿಸಿ ಜಿಲ್ಲೆಯ ಸುರಕ್ಷತೆಯನ್ನು ಹೆಚ್ಚಿಸಬೇಕು. ಅಣಕು ಕವಾಯತು ಹಾಗೂ ಪಥಸಂಚಲನಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೂ ಸಂದೇಶ ನೀಡಬೇಕಾಗಿದೆ ಎಂದು ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರು ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ನೌಕಾಪಡೆಯನ್ನು ನೋಡಲ್ ಸಂಸ್ಥೆ ಯಾಗಿಯೂ ನೇಮಿಸಿದ್ದಾರೆ. ನೌಕಾಪಡೆ ಹಾಗೂ ಪೊಲೀಸ್ ಇಲಾಖೆ ಸೇರಿ ನಡೆಸುತ್ತಿದ್ದ ಸಾಗರ ಕವಚ ಕಾರ್ಯಾಚರಣೆಯನ್ನು ಜಿಲ್ಲಾ ರಕ್ಷಣಾ ಕಾರ್ಯಚರಣೆಯಾಗಿ ಪರಿವರ್ತಿಸುವಂತೆ ಸೂಚನೆ ನೀಡಿದ್ದಾರೆ ಎಂದರು.
ವಿದ್ಯಾರ್ಥಿ ಸಮೂಹವನ್ನು ಬಿಕ್ಕಟ್ಟು ನಿರ್ವಹಣೆ ಹಾಗೂ ತುರ್ತು ಸಂದರ್ಭವನ್ನು ಎದುರಿಸುವ ಕ್ರಿಯೆಯಲ್ಲಿ ಭಾಗಿಗಳಾಗಿ ಮಾಡಿಕೊಳ್ಳಬೇಕು. ಖಾಸಗಿ ಹಾಗೂ ಪೊಲೀಸ್ ಸುರಕ್ಷಾ ವ್ಯವಸ್ಥೆಯ ಮಧ್ಯೆಯೂ ಸಮನ್ವಯತೆ ಇರಬೇಕು. ಜಿಲ್ಲೆಯಲ್ಲಿ ಯುಪಿಸಿಎಲ್, ಸುಜ್ಲಾನ್, ಐಎಸ್ಪಿಆರ್ಎಲ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ. ಶಿಕ್ಷಣ ಸಂಸ್ಥೆಗಳು ಸಹ ಸಾಕಷ್ಟು ಇವೆ. ಈ ಎಲ್ಲ ಸಂಸ್ಥೆಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪೊಲೀಸ್ ಇಲಾಖೆ ಸುರಕ್ಷತೆಯನ್ನು ಪರಿಶೀಲಿಸಿ ಆ ನಂತರ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಳ್ಳಬೇಕು.
ಶ್ರೀಕೃಷ್ಣ ಮಠಕ್ಕೆ ಪ್ರತಿ ನಿತ್ಯ ಬರುವ ಸಾವಿರಾರು ಭಕ್ತರ ಸುರಕ್ಷತೆಗೂ ಆದ್ಯತೆ ನೀಡಬೇಕು. ಮೀನುಗಾರಿಕೆಗೆ ತೆರಳು ವವರ ಸಂಪೂರ್ಣ ಮಾಹಿತಿ ಮೀನು ಗಾರಿಕಾ ಇಲಾಖೆ ಪಡೆಯಬೇಕು. ಇಲ್ಲದಿ ದ್ದರೆ ಮೀನುಗಾರಿಕಾ ಇಲಾಖೆಯ ಅಧಿ ಕಾರಿಗಳನ್ನು ಹೊಣೆಗಾರರನ್ನಾಗಿ ಮಾಡ ಲಾಗುವುದು ಎಂದು ಎಚ್ಚರಿಸಿದರು.
ಎಲ್ಲ ಮೀನುಗಾರಿಕಾ ಬೋಟ್ ಗಳನ್ನು ನೋಂದಣಿ ಮಾಡಬೇಕು. ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ನೀಡಬೇಕು. ಆಧಾರ್ ವಿವರಗಳನ್ನೂ ಪಡೆಯಬೇಕು. ಈ ಸಂಬಂಧ ಕರಾವಳಿ ಕಾವಲು ಪಡೆ, ಮೀನುಗಾರಿಕಾ ಇಲಾಖೆಯ ಪ್ರತ್ಯೇಕ ಸಭೆ ಕರೆಯಬೇಕು ಎಂದು ಕೋಸ್ಟ್ಗಾರ್ಡ್ ಕಮಾಂಡೆಂಟ್ ವಿಜಯ್ ಹೇಳಿದರು.
ಕರಾವಳಿ ಸುರಕ್ಷತೆಗೆ ಪರಿಣಾಮಕಾರಿ ಯೋಜನೆ ರೂಪಿಸುವಂತೆ. ಆಂತರಿಕ ಭದ್ರತೆ ಹಾಗೂ ಸಮನ್ವಯತೆ ಸಾಧಿಸುವ ಬಗ್ಗೆ ಗಮನಹರಿಸುವಂತೆ ಮುಖ್ಯ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ. ಆಗಸ್ಟ್ ತಿಂಗಳ ಒಳಗಾಗಿ ಬೋಟ್ಗಳಿಗೆ ಕಲರ್ ಕೋಡಿಂಗ್ ಮಾಡುವ ಕೆಲಸ ಪೂರ್ಣಗೊಳಿಸು ವಂತೆಯೂ ತಿಳಿಸಿದ್ದಾರೆ ಎಂದು ಜಿಲ್ಲಾ ಎಪಿ ಕೆ. ಅಣ್ಣಾಮಲೈ ಹೇಳಿದರು.
ದೊಡ್ಡ ದೇವಾಲಯಗಳಲ್ಲಿ ಈಗಾಗಲೇ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ, ಆದರೆ ಹಲವು ದೇವಸ್ಥಾನಗಳಲ್ಲಿ ಇವು ಕೆಲಸ ಮಾಡುತ್ತಿಲ್ಲ. ಇದರ ನಿರ್ವಹಣೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಕ್ರಿಸ್ತರಾಜ್, ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.