ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ವರ್ಷ ತುಂಬಿದೆ. ‘ಈ ವರ್ಷದ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ಇದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಸರ್ಕಾರದ ಕಾರ್ಯಶೈಲಿ ಹಾಗೂ ಸಾಧನೆಯನ್ನು ಅವಲೋಕಿಸಿದರೆ ಹೆಮ್ಮೆಪಡುವಂತಹುದೇನೂ ಆಗಿಲ್ಲ ಅಂತ ಅನಿಸುತ್ತದೆ.
ಈ ಸರ್ಕಾರದ ಯೋಜನೆಗಳು ಏನು ಎಂದು ಎಷ್ಟೇ ತಲೆಕೆದರಿಕೊಂಡರೂ ಎರಡೇ ನೆನಪಾಗುತ್ತವೆ. ಒಂದು ‘ಅನ್ನಭಾಗ್ಯ’, ಇನ್ನೊಂದು ‘ಕ್ಷೀರಭಾಗ್ಯ’! ಈ ‘ಜನಪ್ರಿಯ’ ಯೋಜನೆಗಳಿಗೆ ಹೊರತಾದ ದೂರದೃಷ್ಟಿಯುಳ್ಳ ಚಿಂತನೆ ಮತ್ತು ಕಾರ್ಯಕ್ರಮಗಳೇ ಕಾಣಸಿಗುವುದಿಲ್ಲ. ಜನಪ್ರಿಯ ಯೋಜನೆಗಳು ಬೇಕು. ಆದರೆ, ಅವಷ್ಟೇ ಸಾಲದು.
ಕೃಷಿ ಬೆಳವಣಿಗೆಗೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಗೆ ಮೂಲ ಸೌಕರ್ಯಗಳು ಅಗತ್ಯ. ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಅವಕಾಶಗಳ ಸೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರದ ಚಿಂತನೆ ಏನು? ಈ ಯಾವುದಕ್ಕೂ ನೀಲನಕಾಶೆಯೇ ಸಿದ್ಧಗೊಂಡಂತಿಲ್ಲ.
ಸರ್ಕಾರ, ಕಾಲ ದೂಡಿಕೊಂಡು ಹೋಗುತ್ತಿದೆಯೇನೊ ಎಂಬ ಅನುಮಾನ ಮೂಡುತ್ತದೆ. ಸಂಪುಟದಲ್ಲಿ ಹೆಚ್ಚಿನವರು ಮಂತ್ರಿಪದವಿಯ ಸುಖ ಲೋಲುಪತೆಯಲ್ಲಿ ಮೈಮರೆತಂತಿದೆ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡುವುದು ಕಾಣಿಸುತ್ತಲೂ ಇಲ್ಲ, ಅನುಭವಕ್ಕೂ ಬರುತ್ತಿಲ್ಲ. ಸಚಿವರೇ ಅದಕ್ಷರಾದರೆ ಅಧಿಕಾರಿಗಳು ಆರಾಮ ಕುರ್ಚಿಯಲ್ಲೇ ತೂಕಡಿಸುತ್ತಾರೆ. ‘ತೂಕಡಿಕೆ’, ಯಾವುದೇ ಸರ್ಕಾರದ ಆಡಳಿತ ವೈಖರಿಗೆ ಸಂಕೇತ ಆಗಬಾರದು. ಅಲ್ಲವೆ?
ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ಜನತೆ ಕಾಂಗ್ರೆಸ್ಸಿಗೆ ಅವಕಾಶ ನೀಡಿದ್ದಾರೆ. ಈ ಸರ್ಕಾರದ ಬಗ್ಗೆ ಹೆಚ್ಚಿನ ಅಪೇಕ್ಷೆಗಳನ್ನೂ ಇಟ್ಟುಕೊಂಡಿದ್ದಾರೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ನಡೆಯುವಲ್ಲಿ ಸರ್ಕಾರ ಎಡವಿದೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಅದು ಪ್ರತಿಫಲಿಸಿದೆ ಕೂಡ.
ದೂರದೃಷ್ಟಿಯುಳ್ಳ ಯೋಜನೆಗಳ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ ಎಂಬಂತಿದೆ ಸರ್ಕಾರದ ನಡೆ. ಭ್ರಷ್ಟಾಚಾರವನ್ನು ಮಟ್ಟ ಹಾಕುವ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನ ಕೂಡ ಆಗಿಲ್ಲ. ಇನ್ನು, ತೆರಿಗೆ ಸಂಗ್ರಹ ಮತ್ತು ಅಭಿವೃದ್ಧಿಯಲ್ಲೂ ಎದ್ದು ಕಾಣುವಂಥ ಸಾಧನೆಯೇನೂ ಗೋಚರಿಸುತ್ತಿಲ್ಲ.
ಉಮೇದಿನಲ್ಲಿ ಏನೋ ಒಂದು ಹೇಳುವುದು, ಅದಕ್ಕೆ ವಿರೋಧ ವ್ಯಕ್ತವಾದಾಗ ಹಿಂದಕ್ಕೆ ಸರಿಯುವುದಂತೂ ಈ ಸರ್ಕಾರಕ್ಕೆ ಚಾಳಿಯಂತೆ ಅಂಟಿಕೊಂಡಿದೆ. ದಕ್ಷತೆಗೆ ಹೆಸರಾದವರು ಸಿದ್ದರಾಮಯ್ಯ. ಆದರೆ ಆಡಳಿತದಲ್ಲಿ ಅವರ ಛಾಪು ಕಾಣಿಸುವುದಿಲ್ಲ. ಸರ್ಕಾರಕ್ಕೆ ಒಂದು ಗೊತ್ತು–ಗುರಿ ಇದ್ದಂತೆಯೂ ಅನಿಸುವುದಿಲ್ಲ.
ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಮುಖ್ಯಮಂತ್ರಿ ಈಗಲಾದರೂ ದೃಢ ಸಂಕಲ್ಪ ಮಾಡಬೇಕು. ಅವರು ಇಚ್ಛಾಶಕ್ತಿ ತೋರಿದರೆ ಆಡಳಿತ ತಾನಾಗಿಯೇ ಚುರುಕು ಪಡೆಯುತ್ತದೆ. ಕಾಲ ತಳ್ಳಿಕೊಂಡು ಹೋಗುವುದೇ ಆದ್ಯತೆಯಾಗುವುದು ಬೇಡ. ಅಪ್ರಸ್ತುತ ಮತ್ತು ಕ್ಷುಲ್ಲಕ ವಿಚಾರಗಳ ಕುರಿತು ಹೆಚ್ಚು ಗಮನ ಕೊಡುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳ ಕಡೆ ದೃಷ್ಟಿ ನೆಡಬೇಕು.
ಆಡಳಿತದಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಲು ದೃಢವಾದ ಹೆಜ್ಜೆ ಇಡಬೇಕು. ಶಿಕ್ಷಣ ಕ್ಷೇತ್ರ ಒಳಗೊಂಡಂತೆ ವಿವಿಧ ರಂಗಗಳಲ್ಲಿ ಗೊಂದಲಗಳು ಇವೆ. ಅವುಗಳನ್ನು ನಿವಾರಿಸಬೇಕು. ನಮ್ಮ ಯೋಗಕ್ಷೇಮ ನೋಡುವ ಸರ್ಕಾರವೊಂದು ಇದೆ ಎನ್ನುವ ಭರವಸೆ ಜನಸಾಮಾನ್ಯರಲ್ಲಿ ಮೂಡುವಂತೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.