ನವದೆಹಲಿ (ಪಿಟಿಐ): ದೆಹಲಿಯಲ್ಲಿ ರಾಜ್ಯ ಸರ್ಕಾರ ರಚನೆಗೆ ತನ್ನನ್ನು ಆಹ್ವಾನಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ನಾಗರಿಕನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿಹಾಕಿದೆ.
ರಾಜ್ಯ ವಿಧಾನಸಭೆಯಲ್ಲಿ ತನಗೆ ಕೆಲವು ಶಾಸಕರ ಬೆಂಬಲವಿದ್ದು, ಸರ್ಕಾರ ರಚಿಸಲು ಆಹ್ವಾನಿಸಬೇಕೆಂದು ಬಮ್ ಬಮ್ ಮಹಾರಾಜ್ ಎಂಬ ದೆಹಲಿ ನಿವಾಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಎ.ಕೆ. ಸಿಕ್ರಿ ತಳ್ಳಿಹಾಕಿದರು. ಅಲ್ಲದೆ, ಚುನಾಯಿತ ಸದಸ್ಯನಲ್ಲದ ವ್ಯಕ್ತಿಯೊಬ್ಬ ಸರ್ಕಾರ ರಚಿಸಲು ಅವಕಾಶ ಕೇಳಿರುವ ಪ್ರಕರಣದ ಬಗ್ಗೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು.
ಲೆಫ್ಟಿನೆಂಟ್ ಗವರ್ನರ್ಗೆ ಹಲವು ಪತ್ರಗಳನ್ನು ಬರೆದರೂ ಮತ್ತು ಶಾಸಕರಾದ ವಿನೋದ್ ಕೆ. ಬಿನ್ನಿ, ರಣಬೀರ್ ಶೊಕೀನ್, ಅನಿಲ್ ಝಾ ಹಾಗೂ ಗಗನ್ ಸಿಂಗ್ ಅವರ ಬೆಂಬಲವಿರುವ ಪತ್ರವನ್ನು ಸಲ್ಲಿಸಿದರೂ, ತನಗೆ ಸರ್ಕಾರ ರಚಿಸಲು ಅವಕಾಶ ನೀಡಿಲ್ಲ ಎಂದು ಅರ್ಜಿದಾರರು ದೂರಿದರು. ‘ಚುನಾಯಿತ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ತನಗೆ ಅವಕಾಶ ನಿರಾಕರಿಸಿ ಆದೇಶ ಹೊರಡಿಸಿರುವುದು ನಿರಂಕುಶ ಮತ್ತು ಅಸಾಂವಿಧಾನಿಕ’ ಎಂದು ಅವರು ನುಡಿದರು.