ನವದೆಹಲಿ (ಪಿಟಿಐ): ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ನಾಯಕರು ಶುಕ್ರವಾರ ಸತತ ಸಭೆ ನಡೆಸುತ್ತಿರುವುದರಿಂದ ಸರ್ಕಾರ ರಚನೆಯ ಕಾರ್ಯ ಚುರುಕುಗೊಂಡಿದೆ.
ಮೋದಿ ಅವರು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ ಮತ್ತು ಅರುಣ್ ಜೇಟ್ಲಿ ಅವರ ಜತೆ ಗುಜರಾತ್ ಭವನದಲ್ಲಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಮೋದಿ ಸಂಪುಟದಲ್ಲಿ ಯಾರು, ಯಾರು ಸಚಿವರಾಗಿರಬೇಕು ಎಂಬುದರ ಬಗ್ಗೆ ಗಹನವಾದ ಚರ್ಚೆ ನಡೆಯಿತು ಎನ್ನಲಾಗಿದೆ. ಬೆಳಿಗ್ಗೆ ಅಕಾಲಿ ದಳದ ಮುಖ್ಯಸ್ಥ ಹಾಗೂ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅವರ ಪುತ್ರ, ಉಪಮುಖ್ಯಮಂತ್ರಿ ಸುಖಬಿರ್ ಬಾದಲ್ ಅವರು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಿಜೆಪಿ ಜತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿರುವ ಅಕಾಲಿ ದಳಕ್ಕೆ ಒಂದು ಸಚಿವ ಸ್ಥಾನ ದೊರಕುವುದು ಖಚಿತವಾಗಿದೆ.
ಆರ್ಎಸ್ಎಸ್ ಪಾತ್ರ: ಇದೇ ಸಂದರ್ಭದಲ್ಲಿ ಆರ್ಎಸ್ಎಸ್ ಮುಖಂಡ ರಾಮ್ ಮಾಧವ್ ಅವರು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದರಿಂದ ಸಂಪುಟ ರಚನೆಯಲ್ಲಿ ಆರ್ಎಸ್ಎಸ್ ಪ್ರಮುಖ ಪಾತ್ರ ವಹಿಸಲಿದೆ ಎಂಬ ಸೂಚನೆ ಸಿಕ್ಕಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಶ್ರೀಲಂಕಾ ಅಧ್ಯಕ್ಷರನ್ನು ಈ ಸಮಾರಂಭಕ್ಕೆ ಆಮಂತ್ರಿಸಿರುವ ಬಗ್ಗೆ ಅಪಸ್ವರ ಎದ್ದಿದೆ.
ಬಿಜೆಪಿ ಮಿತ್ರ ಪಕ್ಷವಾದ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಮೋದಿ ಅವರನ್ನು ಭೇಟಿ ಮಾಡಿ ರಾಜ್ಪಕ್ಸೆ ಅವರನ್ನು ಆಮಂತ್ರಿಸಿರುವ ನಿರ್ಧಾರವನ್ನು ಪುನರ್ಪರಿಶೀಲನೆ ಮಾಡುವಂತೆ ಮನವಿ ಮಾಡಿದರು.