ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯನ್ನು (ಅ.31) ‘ರಾಷ್ಟ್ರೀಯ ಏಕತಾ ದಿವಸ’ವೆಂದು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಹುತಾತ್ಮರ ದಿನ (ಇಂದಿರಾ ಗಾಂಧಿ ಪುಣ್ಯ ತಿಥಿ) ಕಡೆಗಣಿತವಾಗುವ ಸಾಧ್ಯತೆ ಇದೆ.
ಪಟೇಲ್ ಅವರು ನಡೆಸಿದ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ಸ್ವತಂತ್ರಗೊಂಡ ಮೇಲೆ ರಾಜರ ಆಳ್ವಿಕೆಯಲ್ಲಿದ್ದ ರಾಜ್ಯಗಳನ್ನು ದೇಶದಲ್ಲಿ ಐಕ್ಯಗೊಳಿಸಲು ಅವರು ಪಟ್ಟ ಶ್ರಮವನ್ನು ಜನತೆಗೆ ತಿಳಿಸಲು ‘ಏಕತೆಗಾಗಿ ಓಟ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
‘ಜನ ಧನ’ ಮತ್ತು ‘ಸ್ವಚ್ಛ ಭಾರತ ಅಭಿಯಾನ’ಗಳಂತೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತೀರ್ಮಾನಿಸಿರುವ ಸರ್ಕಾರ, ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕೇಂದ್ರ ಗೃಹ ಸಚಿವಾಲಯವನ್ನು ನೋಡಲ್ ಕೇಂದ್ರವನ್ನಾಗಿ ಮಾಡಿದೆ.
ಈ ಕಾರ್ಯಕ್ರಮಗಳನ್ನು ದೇಶದಾದ್ಯಂತ ಮುನ್ನಡೆಸಲು ಬಿಜೆಪಿಯನ್ನು ಸಜ್ಜುಗೊಳಿಸಲಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಎರಡು ದಿನಗಳ ಹಿಂದೆ ಪಕ್ಷದ ಮುಖಂಡರು ಮತ್ತು ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.