‘ನರೇಂದ್ರ ಮೋದಿ ಅವರನ್ನು ವಿರೋಧಿಸುತ್ತಿರುವವರಿಗೆ ಭಾರತದಲ್ಲಿ ಜಾಗವಿಲ್ಲ. ಅವರು ಪಾಕಿಸ್ತಾನಕ್ಕೆ ಹೋಗಬೇಕು’ ಎಂಬ ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರ ಹೇಳಿಕೆ, ‘ಹಿಂದೂಗಳು ವಾಸಿಸುವ ಪ್ರದೇಶದಲ್ಲಿ ಮುಸ್ಲಿಮರು ಆಸ್ತಿ ಖರೀದಿಸದಂತೆ ನೋಡಿಕೊಳ್ಳಬೇಕು’ ಎಂಬ ವಿಎಚ್ಪಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ದ್ವೇಷದ ಮಾತು ಯಾರಿಗಾದರೂ ನೋವನ್ನುಂಟು ಮಾಡುವಂಥವು.
ಇಂಥ ಭೇದಭಾವದ, ದ್ವೇಷದ ಮಾತು ಮತ್ತು ಹೇಳಿಕೆಗಳು ಬಿಜೆಪಿ ಸಾಗುತ್ತಿರುವ ದಾರಿಯನ್ನು ಸೂಚಿಸುತ್ತವೆ ಎಂಬ ಭಾವನೆಗೆ ಪುಷ್ಟಿ ಕೊಡುತ್ತಿವೆ ಎಂದು ತಿಳಿಯಲು ಅವಕಾಶ ಕಲ್ಪಿಸುತ್ತವೆ. ಒಂದು ರಾಷ್ಟ್ರೀಯ ಪಕ್ಷದ ಮತ್ತು ಸಂಘಟನೆಯ ಮುಖಂಡರು ಇಂಥ ಅವಿವೇಕದ, ಅಪ್ರಬುದ್ಧ ಮಾತು ಆಡುವುದನ್ನು ನೋಡಿದರೆ ನಾವು ಪ್ರಜಾಪ್ರಭುತ್ವದ ಕಾಲದಲ್ಲಿದ್ದೇವೆಯೋ ಅಥವಾ ಸರ್ವಾಧಿಕಾರದ ಕಾಲದಲ್ಲಿದ್ದೇವೆಯೋ ಎಂಬ ಅನುಮಾನ ಶುರು ಆಗುತ್ತದೆ.
ಬಹು ಸಂಸ್ಕೃತಿಗಳ ಬೀಡಾಗಿರುವ ಭಾರತದಲ್ಲಿ ಎಲ್ಲ ಜಾತಿ, ಮತ, ವರ್ಗದ ಜನರೂ ಇದ್ದಾರೆ. ಇವರೆಲ್ಲರೂ ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸದಲ್ಲಿ ಬದುಕುತ್ತಿರುವ ಸಂಗತಿ ತಿಳಿದೇ ಇದೆ. ಹಾಗಾಗಿ ಈ ಎಲ್ಲ ಜನವರ್ಗದವರ ಪ್ರೀತಿ, ವಿಶ್ವಾಸ, ಸ್ನೇಹಕ್ಕೆ ಕುಂದು ತರುವಂಥ, ಭೇದಭಾವವನ್ನು ಅನಗತ್ಯವಾಗಿ ಸೃಷ್ಟಿಸುವ ಮೇಲಿನಂಥ ಹೇಳಿಕೆಗಳನ್ನು ನೀಡುವುದರ ಮೂಲಕ ಜನಮನವನ್ನು ಒಡೆದಾಳುವ ತಂತ್ರವನ್ನು ನಿಲ್ಲಿಸುವುದು ಇಂದಿನ ಅಗತ್ಯವಾಗಿದೆ. ಇದು ಚುನಾವಣಾ ಸಂದರ್ಭದ ಮತ ಗಳಿಕೆಯ ತಂತ್ರಗಾರಿಕೆ ಎಂದು ಅಂದುಕೊಂಡರೂ ನಮ್ಮ ಕೂಡಿ ಬಾಳುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕುದಲ್ಲದ ನಡೆಯಾಗಿದೆ. ಮಾತು ಒಡೆದ ಮನಗಳನ್ನು ಬೆಸೆಯಬೇಕೆ ವಿನಾ ಕೂಡಿ ಬಾಳುವ ಮನಗಳನ್ನು ಒಡೆಯಬಾರದು. ಇದು ಪ್ರಜಾಪ್ರಭುತ್ವದ ಮುಖ್ಯ ಆಶಯ.
ರಾಜಕಾರಣಿಗಳು,ಸಂಘಟನೆಗಳ ಮುಖ್ಯಸ್ಥರು ತಾವು ಸರ್ವಾಧಿಕಾರಿಗಳೆಂದು ಭಾವಿಸಿಕೊಳ್ಳದೆ ಶಿಷ್ಟಾಚಾರಕ್ಕಾದರೂ ವಿನಯಶೀಲತೆ, ಮಾನವಪ್ರೀತಿ, ಸಮತಾ ಗುಣ ಬೆಳೆಸಿಕೊಳ್ಳುವುದು ವಿಹಿತ.