ನವದೆಹಲಿ: ಮಾತೃಭಾಷೆ ಶಿಕ್ಷಣ ಹಾಗೂ ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ರಾಜ್ಯದ ಸರ್ವ ಪಕ್ಷಗಳ ನಿಯೋಗ ಈ ತಿಂಗಳ 22ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಪ್ರಧಾನಿ ಅವರನ್ನು ಭೇಟಿ ಮಾಡಲು ಸಮಯ ಕೇಳಲಾಗಿದೆ. ಭೇಟಿಗೆ ಅವಕಾಶ ಸಿಕ್ಕರೆ ಮಾತೃಭಾಷೆ ಶಿಕ್ಷಣಮಾಧ್ಯಮ ಹಾಗೂ ಮೇಕೆದಾಟು ಯೋಜನೆಗಳನ್ನು ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮೊದಲು ಸರ್ವ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ ಎಂದೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಬೆಂಗಳೂರು ಮಹಾನಗರಪಾಲಿಕೆಯನ್ನು ಆಡಳಿತದ ದೃಷ್ಟಿಯಿಂದ ವಿಭಜನೆ ಮಾಡಲು ಆಲೋಚಿಸಲಾಗಿದೆ. ಬಿಬಿಎಂಪಿ ವಿಭಜನೆ ಭರವಸೆ ಚುನಾವಣೆ ಪ್ರಣಾಳಿಕೆಯಲ್ಲೇ ನೀಡಲಾಗಿತ್ತು. ಇದು ಹೊಸ ಕಾರ್ಯಕ್ರಮವಲ್ಲ ಎಂದು ಅವರು ತಿಳಿಸಿದರು.
ಚುನಾವಣೆಗೆ ಹೆದರಿ ಚುನಾವಣೆ ಮುಂದಕ್ಕೆ ಹಾಕುತ್ತಿಲ್ಲ. ಚುನಾವಣೆ ಯಾವಾಗ ನಡೆಸಬೇಕು. ಹೇಗೆ ನಡೆಸಬೇಕು ಎಂದು ಯಾರಿಂದಲೂ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದೂ ಅವರು ನುಡಿದರು.