ಮುಂಬೈ (ಪಿಟಿಐ): ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ 2002ರಲ್ಲಿ ದಾಖಲಾದ ಡಿಕ್ಕಿ ಹೊಡೆದು ಪರಾರಿಯಾದ (ಹಿಟ್ ಆ್ಯಂಡ್ ರನ್) ಪ್ರಕರಣದ ವಿಚಾರಣೆಯನ್ನು ಸೆಷನ್ ನ್ಯಾಯಲಯ ಏ. 28ಕ್ಕೆ ಮುಂದೂಡಿದೆ.
ಪ್ರಕರಣದ ಸಾಕ್ಷಿದಾರರು ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಪೊಲೀಸರು ಚುನಾವಣಾ ಕರ್ತವ್ಯಕ್ಕೆ ತೆರಳಿರುವುದರಿಂದ ಸಾಕ್ಷಿಗಳನ್ನು ಹಾಜರುಪಡಿಸಲು ಸಮಯಾವಕಾಶ ನೀಡುವಂತೆ ತನಿಖಾಧಿಕಾರಿ ರಾಜೇಂದ್ರ ಖಾನೆ ನ್ಯಾಯಾಧೀಶರಿಗೆ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ಸಾಕ್ಷಿದಾರರು ಏ. 28 ರಂದು ನ್ಯಾಯಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರಾದ ಡಿ. ಡಬ್ಲೂ. ದೇಶಪಾಂಡೆ ಸೂಚಿಸಿದರು.
ಈ ಮೊದಲೂ ಸಹ ಸಾಕ್ಷಿದಾರರು ಮಾರ್ಚ್ 26ರಂದು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಕರಣವನ್ನು ಮುಂದೂಡಲಾಗಿತ್ತು.
2002ರಲ್ಲಿ ಬಾಂದ್ರಾದ ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ ಸಲ್ಮಾನ್ ಖಾನ್ ಕಾರು ಚಲಾಯಿಸಿದ್ದರಿಂದ ಒಬ್ಬ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು.