ಉಡುಪಿ: ‘ಹೊಂದಾಣಿಕೆ, ಸಹಬಾಳ್ವೆ ಪರಸ್ಪರ ಪ್ರೀತಿ ಕುಟುಂಬದಲ್ಲಿದ್ದರೆ ಜೀವನದಲ್ಲಿ ಸಂತೋಷವಿರುತ್ತದೆ. ಇಂತಹ ಉದಾತ್ತ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳ ಬೇಕು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಲಯನ್ಸ್ ಜಿಲ್ಲೆ 317ಸಿ, ಕೆಥೋಲಿಕ್ ಸಭಾದ ಸೌಹಾರ್ದ ಸಮಿತಿ ಮತ್ತು ಉಡುಪಿಯ ಶೋಕ ಮಾತಾ ಇಗರ್ಜಿ ಸಂಯುಕ್ತವಾಗಿ ನಗರದಲ್ಲಿ ಬುಧ ವಾರ ಏರ್ಪಡಿಸಿದ್ದ ಸರ್ವಧರ್ಮ ಕ್ರಿಸ್ಮಸ್ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕುಟುಂಬಗಳು ಅಧೋಗತಿಗೆ ಇಳಿಯು ತ್ತಿದ್ದು ಮೌಲ್ಯಗಳ ಅವನತಿಯಾಗುತ್ತಿದೆ. ಪರಸ್ಪರ ಒಲವು, ಪ್ರಕೃತಿ ಮೇಲಿನ ಪ್ರೀತಿ, ದೀನದಲಿತರು ಮತ್ತು ಹಿಂದುಳಿದವರ ಬಗ್ಗೆ ಕಾಳಜಿಗೆ ಗೋದಲಿ ರೂಪಕ ವಾಗಿದೆ. ಒಂದು ಕುಟುಂಬ, ಕುರುಬರು, ಪ್ರಾಣಿಗಳು, ಜ್ಞಾನಿಗಳು ಆ ಗೋದಲಿಯಲ್ಲಿ ಕಾಣ ಸಿಗುತ್ತಾರೆ. ಅದರಲ್ಲಿರುವ ಜೋಸೆಫ್, ಮರಿಯಾ ಮತ್ತು ಏಸು ಕ್ರಿಸ್ತ ಆದರ್ಶ ಕುಟುಂಬಕ್ಕೆ ಉದಾಹರಣೆ ಯಂತಿ ದ್ದಾರೆ. ಅಲ್ಲಿರುವ ಹುಲ್ಲು ಪ್ರಾಣಿ ಪಕ್ಷಿ ಮತ್ತು ಪರಿ ಸರದ ಪ್ರೇಮದ ದ್ಯೋತಕವಾಗಿದೆ. ಪರಿಶ್ರಮವನ್ನೂ ಅದು ಬಿಂಬಿಸುತ್ತದೆ ಎಂದರು.
ಬಡವರು ಮತ್ತು ಹಿಂದುಳಿದವರ ಏಳಿಗೆಗೆ ಎಲ್ಲರೂ ಸದಾ ಶ್ರಮಿಸಬೇಕು. ಅವರ ಕಷ್ಟ– ಸುಖಗಳನ್ನು ನಮ್ಮ ದೆಂದು ಭಾವಿಸಿ ಪ್ರೀತಿ ತೋರಿಸಬೇಕು. ಪರರ ಸಂತೋಷ ನಮ್ಮ ಸಂತೋಷ ಎಂದು ಎನಿಸಿದಾಗ ಗಾಂಧೀಜಿ ಅವರ ರಾಮರಾಜ್ಯ ಸ್ಥಾಪನೆ ಸಾಧ್ಯವಾಗುತ್ತದೆ ಎಂದರು.
ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಲಯನ್ ಕೆ. ಸುರೇಶ್ ಪ್ರಭು, ಧರ್ಮಗುರು ಫ್ರೆಡ್ ಮಸ್ಕರೇನಸ್, ಸೌಹಾರ್ದ ಸಮಿತಿ ಸಂಚಾಲಕ ಅಲ್ಫೊನ್ಸ್ ಡಿಕೋಸ್ಟ, ಕೆಥೋಲಿಕ್ಸಭಾದ ಅಧ್ಯಕ್ಷ ಲೆಸ್ಲಿ ಕರ್ನೇಲಿಯೊ, ದಾವಣಗೆರೆಯ ಮೌಲಾನ ಬಿ.ಎ. ಇಬ್ರಾಹಿಂ, ಲಾರೆನ್ಸ್ ಡಿಕೋಸ್ಟ, ಸಪ್ನಾ ಸುರೇಶ್, ಕುದಿ ವಸಂತಶೆಟ್ಟಿ, ನಾಗೇಶ್ ಕಾಮತ್, ಶ್ರೀಧರ ಶೆಣವ, ಜಾರ್ಜ್ ಸಾಮ್ಯುಯಲ್ ಮತ್ತಿತರರು ಉಪಸ್ಥಿತರಿದ್ದರು.
ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸ್ವಾಗತ ನೃತ್ಯ ಮಾಡಿದರು. ಡಾ. ವಿಜಯೇಂದ್ರ ವಸಂತ್ ಪ್ರಾಸ್ತವಿಕವಾಗಿ ಮಾತನಾಡಿದರು.