ಬೆಂಗಳೂರು: ಶಾಸಕರ ಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಗಿರೀಶ್ ಮಟ್ಟಣ್ಣವರ್ ಸೇರಿ ಮೂವರನ್ನು 66ನೇ ಸೆಷನ್ಸ್ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿತು.
ಏನಿದು ಘಟನೆ: 2003ರ ನವೆಂಬರ್ 1ರಂದು ವಿಧಾನಸೌಧದ ಪಕ್ಕದಲ್ಲಿರುವ ಶಾಸಕರ ಭವನದ ಐದನೇ ಮಹಡಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಬಂದ ಕರೆ ಮೇರೆಗೆ ತಪಾಸಣೆ ನಡೆಸಲಾಗಿತ್ತು. ನಂತರ ಅದು ಹುಸಿ ಬಾಂಬ್ ಎಂದು ಗೊತ್ತಾಯಿತು. ಈ ಸಂಬಂಧ ತನಿಖೆಯ ವೇಳೆ ಪೊಲೀಸರು ಮಟ್ಟಣ್ಣವರ್ ಹಾಗೂ ಇತರ ಆರೋಪಿಗಳನ್ನು ಬಂಧಿಸಿದ್ದರು.