ವಿಜಯಪುರ: ನರೇಂದ್ರ ಮೋದಿ ಸರ್ಕಾರ ಜಾಹೀರಾತುಗಳ ಮೂಲಕ ಮಾತನಾಡುತ್ತಿದೆಯೇ ಹೊರತು, ಸಾಧನೆಗಳು ಮಾತನಾಡುತ್ತಿಲ್ಲ. ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳಲು ದೇಶದ ಜನರ ಕೋಟಿ ಕೋಟಿ ತೆರಿಗೆ ಹಣವನ್ನು ಖರ್ಚು ಮಾಡುವ ಮೂಲಕ ವ್ಯರ್ಥ ಮಾಡುತ್ತಿದೆ ಎಂದು ಸಿಪಿಐಎಂ ರಾಜ್ಯ ಸೆಕ್ರೆಟರಿಯೇಟ್ ಮಂಡಳಿಯ ಸದಸ್ಯೆ ಎಸ್.ವರಲಕ್ಷ್ಮೀ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಿಪಿಐಎಂ, ಸಿಪಿಐ, ಎಸ್ಯುಸಿಐ ವತಿಯಿಂದ ಭಾನುವಾರ ನಡೆದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಇದುವರೆಗೂ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಉಳ್ಳವರ ಪರ ನಿಲುವನ್ನೇ ವ್ಯಕ್ತಪಡಿಸುತ್ತಿವೆ ಎಂದು ದೂರಿದರು.
ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತರುವ ಜನ ವಿರೋಧಿ ಆರ್ಥಿಕ ನೀತಿಗಳನ್ನು ಮರೆಮಾಚಲು ಕೋಮುವಾದವನ್ನು ಹರಿಬಿಡುತ್ತಿದೆ ಎಂದರು.
ಸಿಪಿಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಎಚ್.ವಿ.ದಿವಾಕರ ಮಾತನಾಡಿ ಬೇಟಿ ಬಚಾವೋ–ಬೇಟಿ ಪಡಾವೋ, ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಸೇರಿದಂತೆ ಉಳಿದ 14 ಯೋಜನೆಗಳು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಘೋಷಣೆಗಳೇ ಆಗಿದ್ದು, ಇದೀಗ ವರ್ಣರಂಜಿತ ಶಬ್ಧಗಳಲ್ಲಿವೆ ಎಂದರು.
ಎಚ್.ಬಿ.ಚಿಂಚೊಳ್ಳಿ, ಪ್ರಕಾಶ ಹಿಟ್ನಳ್ಳಿ ಭೀಮಶಿ ಕಲಾದಗಿ ಮಾತನಾಡಿದರು. ಕಾರ್ಮಿಕ ಮುಖಂಡರಾದ ಲಕ್ಷ್ಮಣ ಹಂದ್ರಾಳ ವಂದಿಸಿದರು. ಅಣ್ಣಾರಾಯ ಇಳಗೇರ ನಿರೂಪಿಸಿದರು. ಸಭೆ ಕೊನೆಯಲ್ಲಿ ಜಿಲ್ಲೆಯ ಸಮಸ್ಯಗಳಿಗೆ ಸಂಬಂಧಿಸಿದಂತೆ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.