ಬೆಂಗಳೂರು: ಬುಧವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಪ್ರಯಾಣಿಕ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.
ಬೆಂಗಳೂರಿನಿಂದ ಹುಬ್ಬಳಿಗೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮೃತಪಟ್ಟ ಬೆನ್ನಲ್ಲೇ, ಮೆಜೆಸ್ಟಿಕ್ ಹಾಗೂ ನೆಲಮಂಗಲ ಪ್ರದೇಶಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಖಾಸಗಿ ಬಸ್ಗಳು ಮತ್ತು ಅಖಿಲ ಭಾರತ ಪ್ರವಾಸಿ ವಾಹನಗಳನ್ನು ತಪಾಸಿಸಿದರು.
ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ಅವರ ನೇತೃತ್ವದ ತಂಡವು ಮೆಜೆಸ್ಟಿಕ್ನ ಸುತ್ತಮುತ್ತ ಕಾರ್ಯಾಚರಣೆ ನಡೆಸಿತು.
‘ಸುಮಾರು ಎರಡೂವರೆ ಗಂಟೆಯ ಅವಧಿಯಲ್ಲಿ 30 ಬಸ್ಗಳನ್ನು ತಪಾಸಣೆ ಮಾಡಲಾಗಿದೆ. ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ.
ಒಂದು ಪ್ರಯಾಣಿಕ ವಾಹನದ ಲಗೇಜು ಇಡುವ ಸ್ಥಳದಲ್ಲಿ ಟೈರುಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಎಲ್ಲಾ ಟೈರುಗಳನ್ನು ಕೆಳಕ್ಕೆ ಇಳಿಸಲಾಯಿತು’ ಎಂದು ಜ್ಞಾನೇಂದ್ರ ಕುಮಾರ್ ಅವರು ತಿಳಿಸಿದರು.
‘ಕಳಸಾ ಬಂಡೂರಿ ಹೋರಾಟದಿಂದಾಗಿ ಬುಧವಾರ ಬೆಳಗಾವಿ, ಪುಣೆ, ಹುಬ್ಬಳ್ಳಿಗೆ ತೆರಳುವ ವಾಹನಗಳ ಪ್ರಮಾಣ ಕಡಿಮೆ ಇತ್ತು. ಗುರುವಾರವೂ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಅವರು ಹೇಳಿದರು.