ಕಾಬೂಲ್ (ಪಿಟಿಐ): ಸಾರ್ಕ್ ಯಾತ್ರೆಯ ಅಂಗವಾಗಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಬುಧವಾರ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ಗೆ ಬಂದಿಳಿದಿದ್ದಾರೆ.
ತುಂತುರು ಹಿಮದ ನಡುವೆಯೆ ಇಸ್ಲಾಮಾಬಾದ್ ನಿಂದ ಕಾಬೂಲ್ಗೆ ಪ್ರಯಾಣಿಸಿದ ಜೈಶಂಕರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಆಫ್ಘಾನ್ ಅಧಿಕಾರಿಗಳು ಹಾಗೂ ಭಾರತದ ಹೈಕಮಿಷನರ್ ಅಮರ್ ಸಿನ್ಹಾ ಅವರು ಸ್ವಾಗತಿಸಿದರು.
'ಸಾರ್ಕ್ ಯಾತ್ರೆಯ ಭಾಗವಾಗಿ ಭಾರತ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಕಾಬೂಲ್ಗೆ ಬಂದಿದ್ದಾರೆ' ಎಂದು ಭಾರತದ ಹೈಕಮಿಷನ್ ಕಚೇರಿ ಟ್ವೀಟ್ ಮಾಡಿದೆ.
ಕಾಬೂಲ್ ತಲುಪಿದ ಬೆನ್ನಲ್ಲೇ, ಅಫ್ಘಾನಿಸ್ತಾನದ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಅವರೊಂದಿಗೆ ಮಾತನಾಡಿದರು.
ನಂತರದಲ್ಲಿ ಆಫ್ಘನ್ ವಿದೇಶಾಂಗ ಕಾರ್ಯದರ್ಶಿಯ ಜತೆಗೆ ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ವಿಷಯಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರೊಂದಿಗೆ ಭೇಟಿ ನಿಗದಿಯಾಗಿದೆ.
ಭಾನುವಾರ ಭೂತಾನ್ ಪ್ರವಾಸದ ಮೂಲಕ ಸಾರ್ಕ್ ಯಾತ್ರೆ ಆರಂಭಿಸಿದ್ದ ಜೈಶಂಕರ್ ಅವರು, ಬಳಿಕ ಬಾಂಗ್ಲಾದೇಶ, ಪಾಕಿಸ್ತಾನದ ನಂತರ ಇದೀಗ ಆಫ್ಘಾನಿಸ್ತಾನದಲ್ಲಿದ್ದಾರೆ. ಅಲ್ಲಿಂದ ಸ್ವದೇಶಕ್ಕೆ ಮರಳಲಿದ್ದಾರೆ.