ಐಪಿಎಲ್ನ ಆರನೇ ಆವೃತ್ತಿಯ ಸ್ಪಾಟ್ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಕೆಲವು ನೈತಿಕ ಪ್ರಶ್ನೆಗಳನ್ನು ಎತ್ತಿರುವುದು ಗಮನಾರ್ಹ. ಐಪಿಎಲ್ ಕಳ್ಳಾಟದ ಕುರಿತ ಮುಕುಲ್ ಮುದ್ಗಲ್ ಸಮಿತಿಯ ತನಿಖಾ ವರದಿಯು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಎನ್. ಶ್ರೀನಿವಾಸನ್ ಅವರನ್ನು ನಿರ್ದೋಷಿ ಎಂದಿದೆ. ಈ ಬಗ್ಗೆ ಪ್ರಸ್ತಾಪಿಸಿರುವ ನ್ಯಾಯಮೂರ್ತಿಗಳಾದ ಕಲೀಫುಲ್ಲಾ ಮತ್ತು ಟಿ.ಎಸ್. ಠಾಕೂರ್ ಅವರ ಪೀಠ ಸಾರ್ವಜನಿಕರ ವಿಶ್ವಾಸವೂ ಬಲು ಮುಖ್ಯ ಎಂದಿದೆ. ಎಲ್ಲವನ್ನೂ ಕಾನೂನು, ಸಾಕ್ಷ್ಯಾಧಾರ, ಬೈಲಾಗಳಲ್ಲಿರುವ ನಿಯಮಗಳ ಚೌಕಟ್ಟಿನೊಳಗೇ ವಿಶ್ಲೇಷಿಸುವ ಧಾವಂತದಲ್ಲಿ ಸಾರ್ವಜನಿಕರ ವಿಶ್ವಾಸ ಪಡೆಯಬೇಕಾದ ತತ್ವವನ್ನೇ ಮರೆತು ಬಿಡುತ್ತೇವಲ್ಲ ಎಂಬ ಆತಂಕದ ಧ್ವನಿ ನ್ಯಾಯಪೀಠದಿಂದ ಕೇಳಿ ಬಂದಿದೆ. ಇದು ನಿಜಕ್ಕೂ ಅರ್ಥಗರ್ಭಿತ ಕಳಕಳಿ.
ಶ್ರೀನಿವಾಸನ್ ಸ್ಪಾಟ್ಫಿಕ್ಸಿಂಗ್ನಲ್ಲಿ ಪಾಲ್ಗೊಂಡಿದ್ದಕ್ಕೆ ಸಾಕ್ಷ್ಯಗಳಿಲ್ಲ, ಬೆಟ್ಟಿಂಗ್ ನಡೆಸಿದ್ದಕ್ಕೆ ದಾಖಲೆಗಳಿಲ್ಲ, ನಿಜ. ಹೀಗಾಗಿ ಮುದ್ಗಲ್ ಸಮಿತಿಯ ಹಿಡಿತಕ್ಕೆ ಇವರ ಜುಟ್ಟು ಸಿಕ್ಕಿಲ್ಲ. ಆದರೆ ಇವರು ಬಿಸಿಸಿಐ ಅಧ್ಯಕ್ಷರಾಗಿದ್ದಾಗಲೇ ಈ ಎಲ್ಲಾ ಹಗರಣಗಳು ನಡೆದಿವೆ. ಇಂಡಿಯಾ ಸಿಮೆಂಟ್ಸ್ ಒಡೆತನದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರು ಈ ಹಗರಣಗಳಲ್ಲಿ ಎದ್ದು ಕಾಣುತ್ತಿದೆ. ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್ ಕಂಪೆನಿಯ ಮಾಲೀಕರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶ್ರೀನಿವಾಸನ್ ಅವರನ್ನು ತಪ್ಪಿತಸ್ಥ ಎನ್ನುವಂತಿಲ್ಲ. ಆದರೆ ಅವರಿಗೆ ಗೊತ್ತಿಲ್ಲದೆಯೇ ಎಲ್ಲವೂ ನಡೆದಿದೆ ಎನ್ನುವಂತೆಯೂ ಇಲ್ಲ. ಹಗರಣದಲ್ಲಿ ಸಿಲುಕಿದ್ದಾರೆ ಎಂದು ಮುದ್ಗಲ್ ಸಮಿತಿ ಬೆಟ್ಟು ಮಾಡಿರುವ ಕೆಲವರು ಶ್ರೀನಿವಾಸನ್ ನಿಕಟವರ್ತಿಗಳೇ ಆಗಿದ್ದಾರೆ. ಬೆಟ್ಟಿಂಗ್ ಆರೋಪಕ್ಕೆ ಒಳಗಾಗಿರುವ ವ್ಯಕ್ತಿಯ ಸಂಬಂಧಿಯೂ ಆಗಿದ್ದಾರೆ ಅವರು. ಪರಿಸ್ಥಿತಿ ಹೀಗಿರುವಾಗ ‘ಮತ್ತೆ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಲು ಅನುಮತಿ ನೀಡಿ’ ಎಂದು ಶ್ರೀನಿವಾಸನ್ ನ್ಯಾಯಾಲಯದ ಮೊರೆ ಹೋಗಿರುವುದು ಭಂಡತನದ ಪರಮಾವಧಿಯಲ್ಲದೆ ಇನ್ನೇನು?
ಸಭ್ಯರ ಕ್ರೀಡೆ ಎಂದು ಪರಿಗಣಿಸಲಾಗಿರುವ ಕ್ರಿಕೆಟ್ ಈ ದೇಶದಲ್ಲಿ ಧರ್ಮವಿದ್ದಂತೆ. ಈ ಕ್ರೀಡೆಯ ಜತೆಗೆ ನಾಡಿನ ಯುವಜನರ ಸಂಬಂಧ ಪದಗಳಿಗೆ ನಿಲುಕುವಂತಹದ್ದಲ್ಲ. ಆದರೆ ಕ್ರೀಡಾ ಆಡಳಿತಗಾರರ ಬೇಜವಾಬ್ದಾರಿ ನಡೆಯಿಂದಾಗಿ ಇಂತಹದ್ದೊಂದು ಆಟ ಇವತ್ತು ಕಲುಷಿತಗೊಳ್ಳುತ್ತಿದೆ ಎಂಬುದು ನ್ಯಾಯಪೀಠದ ಅನಿಸಿಕೆ. ಈ ಮಾತುಗಳೆಲ್ಲಾ ನ್ಯಾಯಮೂರ್ತಿಗಳ ಅಭಿಪ್ರಾಯಗಳಷ್ಟೇ ಹೊರತು ಆದೇಶಗಳಲ್ಲ ಎಂದು ಅವಗಣನೆ ಮಾಡುವುದು ಸರಿಯಲ್ಲ.
ಸ್ಪಾಟ್ಫಿಕ್ಸಿಂಗ್, ಬೆಟ್ಟಿಂಗ್ ನಡೆದಿದೆ ಎನ್ನುವುದು ಮೇಲ್ನೋಟಕ್ಕೇ ಸಾರ್ವಜನಿಕರಿಗೆ ಗೊತ್ತಾಗಿದೆ. ಜನ ಕ್ರಿಕೆಟ್ ಪಂದ್ಯಗಳನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಸುಪ್ರೀಂಕೋರ್ಟ್ ಸರಿಯಾದ ಮಾತುಗಳನ್ನೇ ಹೇಳಿದೆ. ಕ್ರಿಕೆಟ್ ಆಡಳಿತಗಾರರೂ ಇದಕ್ಕೆ ಸ್ಪಂದಿಸಬೇಕಿದೆ. ನಿಷ್ಪಕ್ಷಪಾತ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕಿದೆ. ತಮ್ಮ ಜತೆಗೇ ಇದ್ದ ಕಳಂಕಿತರಿಗೆ ತಾಗಿರುವ ಹಗರಣದ ಕೆಸರು ತಮಗೆ ಅಂಟಿಲ್ಲ ಎನ್ನುತ್ತಿರುವ ಶ್ರೀನಿವಾಸನ್ ಮತ್ತೆ ಅಧ್ಯಕ್ಷ ಪಟ್ಟಕ್ಕೆ ಏರಲು ಕಸರತ್ತು ನಡೆಸುತ್ತಿರುವುದು ಸರಿಯಲ್ಲ. ಈ ದೇಶದಲ್ಲಿ ಕ್ರಿಕೆಟನ್ನು ಉಳಿಸುವ ದಿಸೆಯಲ್ಲಿ ಪ್ರಸಕ್ತ ಎದ್ದಿರುವ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲೇಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.