ಕೊಪ್ಪಳ: ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ಮಂಗಳವಾರ ನೇಮಕಾತಿ ರ್್ಯಾಲಿ ನಡೆಯಿತು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆ ನಡೆಸಿದರು.
ಮಂಗಳವಾರ ಕೊಪ್ಪಳ, ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಟ್ರೇಡ್ಮನ್ ಹುದ್ದೆಗೆ ಸಂಬಂಧಿಸಿದಂತೆ ಪರೀಕ್ಷೆ ನಡೆದಿದೆ. ಸುಮಾರು 1,750ಕ್ಕೂ ಹೆಚ್ಚು ಅಭ್ಯರ್ಥಿಗಳು ರ್್ಯಾಲಿಯಲ್ಲಿ ಭಾಗವಹಿಸಿದ್ದರು.ಆ. 18ರಂದು ತಾಂತ್ರಿಕ ಹುದ್ದೆಗಳ ನೇಮಕಾತಿ ರ್್ಯಾಲಿಗೆ ಬಂದಿದ್ದ ಸುಮಾರು 250 ಮಂದಿ ಪೈಕಿ 37 ಮಂದಿ ಓಟದ ಪರೀಕ್ಷೆಯಲ್ಲಿ ಆಯ್ಕೆಯಾದರು. ಅವರಿಗೆ ಉದ್ದ ಜಿಗಿತ, ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿವೆ.
21ರಂದು ಗುಮಾಸ್ತ ಹುದ್ದೆಗೆ ಟೋಕನ್ ನೀಡಲಾಗುತ್ತದೆ. 22ರಂದು ಮೇಲೆ ಹೇಳಿದ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. 23ರಂದು ಇದೇ ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಯಲಿವೆ ಎಂದು ಸುಬೇದಾರ್ ಮೇಜರ್ ಎಸ್.ಪಿ.ಪಡಿ ಮಾಹಿತಿ ನೀಡಿದರು.
ಬೆಳಿಗ್ಗೆಯಿಂದಲೇ ನೂರಾರು ಅಭ್ಯರ್ಥಿಗಳು ಕ್ರೀಡಾಂಗಣದ ಸಮೀಪ ಜಮಾಯಿಸಿದ್ದರು. ನಾಳಿನ ಪರೀಕ್ಷೆಗಳಿಗೆ ಇಂದು ಟೋಕನ್ ನೀಡಲಾಗುತ್ತಿತ್ತು. ಅಭ್ಯರ್ಥಿಯ ಬಲಗೈಗೆ ಮೊಹರು ಹಾಕಿ ಕಳುಹಿಸಲಾಗುತ್ತಿತ್ತು. ಬಂದ ಹಲವು ಅಭ್ಯರ್ಥಿಗಳ ದಾಖಲಾತಿ ದೋಷ, ವಯೋಮಾನ ವ್ಯತ್ಯಾಸ, ದೈಹಿಕ ಅರ್ಹತೆ ಇಲ್ಲದಿರುವ ಕಾರಣಗಳಿಂದ ರ್್ಯಾಲಿಯಲ್ಲಿ ಭಾಗವಹಿಸಲು ಆಗಲಿಲ್ಲ.
ದೈಹಿಕ, ಕ್ರೀಡಾ, ವೈದ್ಯಕೀಯ ಪರೀಕ್ಷೆಯ ಬಳಿಕ ಅಂತಿಮವಾಗಿ ಲಿಖಿತ ಪರೀಕ್ಷೆ ನಡೆಯಲಿದೆ. ಆ ಬಳಿಕ ಅಭ್ಯರ್ಥಿಯ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಪಡಿ ಮಾಹಿತಿ ನೀಡಿದರು.
ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಕ್ರೀಡಾಂಗಣದ ಸಮೀಪವೇ ಕ್ಯಾಂಟೀನ್, ಜೆರಾಕ್ಸ್ ಕೇಂದ್ರ, ಫೋಟೋ ಸ್ಟುಡಿಯೋ ತೆರೆಯಲಾಗಿದೆ. ನೇಮಕಾತಿ ಕಚೇರಿ ನಿರ್ದೇಶಕರು ಸೇರಿದಂತೆ ವಿವಿಧ 98ಮಂದಿ ಅಧಿಕಾರಿಗಳು ಭಾಗವಹಿಸಿದ್ದರು. 23ರಂದು ರ್್ಯಾಲಿ ಅಂತ್ಯಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.