ವಿಶಾಖಪಟ್ಟಣ (ಪಿಟಿಐ/ಐಎಎನ್ಎಸ್): ‘ಹುದ್ ಹುದ್’ ಚಂಡಮಾರುತದಿಂದ ಅಪಾರ ನಷ್ಟ ಅನುಭವಿಸಿರುವ ಆಂಧ್ರಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ₨ ೧,೦೦೦ ಕೋಟಿ ಮಧ್ಯಾಂತರ ನೆರವು ಘೋಷಿಸಿದ್ದಾರೆ.
ಚಂಡಮಾರುತದಿಂದ ತೀವ್ರ ಹಾನಿಯಾಗಿರುವ ವಿಶಾಖಪಟ್ಟಣದ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣವಾಗಿ ನಷ್ಟದ ಅಂದಾಜು ಮಾಡಿದ ಬಳಿಕ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ಕೊಟ್ಟರು.
ಚಂಡಮಾರುತದಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬಕ್ಕೆ ತಲಾ ₨ ೨ ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₨ ೫೦,೦೦೦
ವಿಶಾಖಪಟ್ಟಣ ಸಂಪೂರ್ಣ ನಾಶವಾಗಿದೆ. ಆದರೆ, ಅಲ್ಲಿನ ಜನ ಕಂಗೆಟ್ಟಿಲ್ಲ. ಅವರ ಧೈರ್ಯ ಮೆಚ್ಚಿಕೊಂಡಿದ್ದೇನೆ – ಮೋದಿ |
ಪರಿಹಾರ ಘೋಷಿಸಿದರು.
ಪ್ರತ್ಯೇಕ ಸಮೀಕ್ಷೆ: ‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ನೌಕಾಪಡೆ, ಕರಾವಳಿ ಕಾವಲು ಪಡೆ, ರೈಲ್ವೆ, ವಾಯುನೆಲೆ, ರಾಷ್ಟ್ರೀಯ ಹೆದ್ದಾರಿಗಳಿಗೆ ಆಗಿರುವ ಹಾನಿಯನ್ನು ಅಂದಾಜಿಸಲು ಕೇಂದ್ರದ ತಂಡ ಶೀಘ್ರವೇ ಪ್ರತ್ಯೇಕ ಸಮೀಕ್ಷೆ ಕೈಗೊಳ್ಳಲಿದೆ’ ಎಂದರು.
‘ಈ ದುರ್ಬರ ಸನ್ನಿವೇಶ ಎದುರಿಸಲು ಐದು ದಿನಗಳಿಂದ ಕೇಂದ್ರ ಮತ್ತು ಆಂಧ್ರ ಸರ್ಕಾರಗಳು ಪ್ರತಿ ಕ್ಷಣವೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿವೆ. ಸ್ಥಳೀಯ ಆಡಳಿತ ಕೂಡ ಹೆಗಲು ಕೊಟ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಜತೆಯಾಗಿ ಕೆಲಸ ಮಾಡಿದಲ್ಲಿ ಎಂಥದ್ದೇ ಕಷ್ಟವನ್ನು ಕೂಡ ಎದುರಿಸಬಹುದು’ ಎಂದು ನುಡಿದರು.
‘ಆಂಧ್ರದಲ್ಲಿ ಚಂಡಮಾರುತಕ್ಕೆ ನಲುಗಿರುವ ಪ್ರದೇಶಗಳಿಗೆ ಶೀಘ್ರವೇ ಕೇಂದ್ರದ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಸಂತ್ರಸ್ತರಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಗೆ ಮೊದಲು ಗಮನ ಹರಿಸಲಾಗುತ್ತದೆ’ ಎಂದು ಪ್ರಧಾನಿ ತಿಳಿಸಿದರು.
ಆಂಧ್ರದ ಹಲವೆಡೆ ವೈಮಾನಿಕ ಸಮೀಕ್ಷೆ ನಡೆಸಿದ ಅವರು ವಿಶಾಖಪಟ್ಟಣದಲ್ಲಿ, ಅದರಲ್ಲೂ ಮುಖ್ಯವಾಗಿ ಬಂದರು ರಸ್ತೆಗೆ ಖುದ್ದು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.
‘ರೈತರಿಗೂ ಅಪಾರ ನಷ್ಟ ಆಗಿದೆ. ಶೀಘ್ರವೇ ಬೆಳೆ ವಿಮೆ ನೀಡುವಂತೆ ವಿಮಾ ಕಂಪೆನಿಗಳಿಗೆ ಸೂಚನೆ ನೀಡುತ್ತೇನೆ. ವಿಭಜನೆಯಾದ ತಕ್ಷಣವೇ ಆಂಧ್ರವು ಇಂಥದ್ದೊಂದು ನೈಸರ್ಗಿಕ ವಿಕೋಪ ಎದುರಿಸುವಂತಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಷಾದಿಸಿದರು.
‘ನಾನು ವಿಶಾಖಪಟ್ಟಣವನ್ನು ಸುಸಜ್ಜಿತ ನಗರವನ್ನಾಗಿ ಮಾಡುವ ಕನಸು ಕಂಡ ಹೊತ್ತಿನಲ್ಲಿಯೇ ಆಂಧ್ರಕ್ಕೆ ಚಂಡಮಾರುತ ಅಪ್ಪಳಿಸಿ ಅನಾಹುತ ಮಾಡಿದೆ. ವಿಶಾಖಪಟ್ಟಣದ ಜನರು ವಿಪತ್ತನ್ನು ದಿಟ್ಟತನದಿಂದ ಎದುರಿಸಿದ್ದಾರೆ. ಖಂಡಿತವಾಗಿಯೂ ಈ ಸಂಕಷ್ಟದಿಂದ ಹೊರಬರುತ್ತೇವೆ ಎನ್ನುವ ವಿಶ್ವಾಸ ನನಗಿದೆ’ ಎಂದರು.
ಶ್ಲಾಘನೆ: ಚಂಡಮಾರುತದ ಬಗ್ಗೆ ನಿಖರ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆಯನ್ನು ಅವರು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.