‘ದಯಾಮರಣಕ್ಕೆ 106 ಪಿ.ಡಿ.ಒ.ಗಳ ಮನವಿ’ (ಪ್ರ.ವಾ., ಡಿ. 9) ಸುದ್ದಿ ಓದಿ ಆತಂಕವಾಯಿತು. ವಿವಿಧ ಯೋಜನೆಗಳಲ್ಲಿ ನಿಗದಿತ ಗುರಿ ಸಾಧಿಸಲು ಒತ್ತಡ ಹೇರುತ್ತಿರುವುದರಿಂದ, ಮಾನಸಿಕ ಒತ್ತಡಕ್ಕೆ ಸಿಲುಕಿ, ಕೆಲಸ ಮಾಡಲಾಗದೇ, ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
ನಿಗದಿತ ಗುರಿ ಸಾಧಿಸಲಾಗದೇ ಇರುವುದಕ್ಕೆ ಕಾರಣಗಳನ್ನು ಸರ್ಕಾರದ ಉನ್ನತ ಅಧಿಕಾರಿಗಳು ವಿಶ್ಲೇಷಣೆ ಮಾಡಬೇಕು. ಆಂಥ ಬಾಧಕ ಕಾರಣಗಳ ನಿವಾರಣೆಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ಹಾಗೂ ಅವುಗಳನ್ನು ನಿವಾರಿಸಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲ ನಾಗರಿಕರಿಗೂ ಬದುಕುವ ಹಕ್ಕಿದೆ; ಸಾವಿಗೆ ಆಸ್ಪದವಿಲ್ಲ. ಅಧಿಕಾರ, ವೇತನ, ಸಂಪತ್ತು .... ಇವೆಲ್ಲವುಗಳಿಗಿಂತ ಪ್ರಾಣ ಅತ್ಯಮೂಲ್ಯವಾದದ್ದೆಂದು ಪಿ.ಡಿ.ಒ.ಗಳು ನೆನಪಿಡಬೇಕು. ಬದುಕಿದ್ದರೆ, ಬೇರೆ ಯಾವುದಾದರೂ ಉದ್ಯೋಗ ಮಾಡುತ್ತಾ ಬದುಕಲು ಸಾಧ್ಯವಿದೆ. ಸಾವಿನಂಥ ಭಯಾನಕ ಪ್ರಸಂಗ ಎದುರಾದಾಗ, ತಮ್ಮ ನೌಕರಿಗೆ ರಾಜೀನಾಮೆಯಿತ್ತು, ಮುಕ್ತರಾಗಬಹುದಲ್ಲ!? ಸಾವು ಯಾವ ಸಮಸ್ಯೆಗೂ ಪರಿಹಾರವಲ್ಲ!