ಕಳಸಾ–ಬಂಡೂರಿ ವಿಷಯದಲ್ಲಿ ನ್ಯಾಯಮಂಡಳಿಯ ತೀರ್ಪಿನಿಂದಾಗಿ ಉತ್ತರ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿದೆ. ಮೂಲ ಸೌಕರ್ಯಗಳ ದೃಷ್ಟಿಯಿಂದ ಯಾವತ್ತೂ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಪ್ರದೇಶದ ಜನರು ಸಹಜವಾಗಿಯೇ ಸಿಟ್ಟಿಗೆದ್ದಿದ್ದಾರೆ. ದೇಶದ ನ್ಯಾಯದಾನ ವ್ಯವಸ್ಥೆಯ ಹಾದಿ ದೀರ್ಘವೂ, ದುರ್ಗಮವೂ ಆಗಿದೆ. ಅಲ್ಲಿ ಇತ್ಯರ್ಥವಾಗುವವರೆಗೆ ಜನರು ಸಂಯಮದಿಂದ ವರ್ತಿಸಲೇಬೇಕೆಂದು ಅಪೇಕ್ಷಿಸುವುದು ಸದ್ಯದ ಸ್ಥಿತಿಯಲ್ಲಿ ಆಗದ ಮಾತು.
ಈಗಾಗಲೇ ಪ್ರತ್ಯೇಕ ಕರ್ನಾಟಕದ ಬಾವುಟಗಳು ಕಾಣಿಸತೊಡಗಿದ್ದು ಏಕೀಕರಣದ ಮಹನೀಯರ ಕನಸಿಗೆ ಭಗ್ನ ಬರುವಂಥ ಸನ್ನಿವೇಶದತ್ತ ಹೊರಟಿದ್ದೇವೆ. ಕರ್ನಾಟಕ ಮತ್ತು ಗೋವಾ ಸರ್ಕಾರಗಳ ನಡುವಿನ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ.
ಹಾಗೆ ಅದು ಮಧ್ಯಸ್ಥಿಕೆಗೆ ಮುಂದಾಗುವ ನಿಟ್ಟಿನಲ್ಲಿ ಸಮಗ್ರ ಕರ್ನಾಟಕದ ಶಾಸಕ-ಸಂಸದವರ್ಗ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ತಕ್ಷಣವೇ ರಾಜಕೀಯ ಮಾರ್ಗವನ್ನು ಹುಡುಕಬೇಕು. ಇದಕ್ಕೆ ಪೂರಕವಾಗಿ ಸಮಗ್ರ ಕರ್ನಾಟಕದ ಶಿಕ್ಷಕರು, ಸಾಹಿತಿಗಳು ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಭಾವನೆ ಬಲವಾಗದಂತೆ ನೋಡಿಕೊಳ್ಳಬೇಕು.
-ಡಾ. ಸುದರ್ಶನ ಪಾಟೀಲ ಕುಲಕರ್ಣಿ, ಮೈಸೂರು