ದುಷ್ಕರ್ಮಿಗಳು ಹಾರಿಸಿದ ಗುಂಡು ಕಲಬುರ್ಗಿ ಅವರನ್ನಷ್ಟೆ ಬಲಿಪಡೆಯದೆ, ನಾಡಿನ ಸಮಸ್ತ ಚಿಂತಕರ, ವಿದ್ವಾಂಸರ ಎದೆಗಿಳಿದು ಜನಸಮೂಹವನ್ನು ಅಪಾರ ಶೋಕದಲ್ಲಿ ಮುಳುಗಿಸಿದೆ. ಧಾರವಾಡದಂತಹ ಸಾಂಸ್ಕೃತಿಕ ವಾತಾವರಣದಲ್ಲಿ ದುರಂತ ನಡೆದಿರುವುದು ಸಾಹಿತ್ಯ ಲೋಕದಲ್ಲಿ ದಿಗ್ಭ್ರಮೆ ಮೂಡಿಸಿದೆ.
ಹತ್ಯೆಗೆ ನಿಖರ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದ್ದರೂ,ಸಾಂಸ್ಕೃತಿಕ ವಲಯದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅವರ ಸಾವಿಗೆ ಕಾರಣವಾಗಿರಬಹುದೆಂಬ ಕೂಗು ಬಲಪಡೆದಿದೆ. ಉನ್ನತ ಮಟ್ಟದ ತನಿಖೆಯಿಂದ ಸತ್ಯ ಬಯಲಿಗೆ ಬರಬಹುದು, ಕಾರಣ ಏನೇ ಇದ್ದರೂ ನಾಡಿನ ಬಹುಶ್ರುತ ವಿದ್ವಾಂಸರೊಬ್ಬರ ದುರಂತ ಅಂತ್ಯ ನಾಡಿನ ಸಮಸ್ತರಲ್ಲಿ ಅತೀವ ಶೋಕ ಮೂಡಿಸಿದೆ.