ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಕೆಲವು ಪ್ರಶ್ನೆಗಳು

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಂತೂ ಇಂತೂ ಕನ್ನಡ ಸಾಹಿತ್ಯ ಪರಿ­ಷತ್ತು ಮಡಿ–ಮೈಲಿಗೆಯಿಂದ ಹೊರ­ಬಂದಿದೆ. ಇದಕ್ಕೆ ಪೂರಕವೆಂಬಂತೆ ಕವಿ ಡಾ.ಸಿದ್ಧಲಿಂಗಯ್ಯ ಅವರನ್ನು ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ­ರನ್ನಾಗಿ ಮಾಡಿದೆ.  ನೂರು ವರ್ಷ ತುಂಬುತ್ತಿರು­ವಾಗಲಾದರೂ ಕಸಾಪ ಕಣ್ತೆರೆಯಿತಲ್ಲ ಎಂಬ ಸಮಾಧಾನ ಅನೇಕ ದಲಿತರಲ್ಲಿ ಮೂಡಿದೆ.

ಆದರೆ ಪರಿಷತ್ತಿಗೆ ಇಂತಹ ಮನಸ್ಥಿತಿ ಬರ­ಬೇಕಾದರೆ ೮೦ ವರ್ಷಗಳು ಬೇಕಾಯಿತೆ? ಹಾಗಾ­ದರೆ ಇಲ್ಲಿಯವರೆಗೆ ದಲಿತಪರ ನಿಲ್ಲುವ ಮನಸ್ಸು­ಗಳು ಇರಲಿಲ್ಲವೇ? ಅಥವಾ ಜನಸಾಮಾನ್ಯರು ದಲಿತ ಅಧ್ಯಕ್ಷೀಯತೆ ಪರ ಒಕ್ಕೊರಲಿನ ದನಿ ಎತ್ತುವ ಬದಲು ಸುಮ್ಮನಿದ್ದ ಕಾರಣಗಳಾದರೂ ಏನು? ಈ ಎಲ್ಲಾ ಪ್ರಶ್ನೆಗಳು ತಲೆಯಲ್ಲಿ ಸುತ್ತು­ತ್ತಿವೆ. ಇದರ ನಡುವೆಯೂ ದಲಿತರೊಬ್ಬರನ್ನು ಈ ಬಾರಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಪರಿಷತ್ತಿಗೆ ಅಭಿನಂದನೆಗಳನ್ನು ಸೂಚಿಸಲೇಬೇಕು.

ಸಿದ್ಧಲಿಂಗಯ್ಯ ಅವರು ‘ವ್ಯವಸ್ಥೆಯ ಒಳಗಿದ್ದೇ ಪ್ರತಿಭಟಿಸುತ್ತೇನೆ’ ಎನ್ನುವುದರ ಮೂಲಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತುಂಬು ಹೃದಯ­ದಿಂದಲೇ ಒಪ್ಪಿಕೊಂಡಿದ್ದಾರೆ. ತಮ್ಮ ಬರವಣಿ­ಗೆಯ ಮೂಲಕ ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿದ, ‘ಇಕ್ರಲಾ ವದೀರ್ಲಾ’ ಎನ್ನುವುದರ ಮೂಲಕ ದಲಿತರ ದನಿಯಾಗಿ, ಕೇರಿಯೊಳಗಿನ ಭಾಷೆ, ತವಕ ತಲ್ಲಣಗಳು, ಆಶಯಗಳನ್ನು ಅಕ್ಷರದ ಮೂಲಕ ತೆರೆದಿಟ್ಟು ಪ್ರತಿಭಟಿಸಿದ ಈ ಕವಿ  ಸಮ್ಮೇಳನದ ಅಧ್ಯಕ್ಷತೆಗೆ ಅರ್ಹರು.

ಯಾವ ವಸ್ತು ಕಾವ್ಯವಾಗುವುದಿಲ್ಲ ಎಂದು ಅದುವರೆಗೆ ಸಾಹಿತ್ಯ ವಲಯ ನಂಬಿತ್ತೋ ಅದನ್ನು ಕಾವ್ಯವಾಗಿಸಿದ ಕೀರ್ತಿ ಸಿದ್ಧಲಿಂಗಯ್ಯ ಅವರದು. ಆ ಮೂಲಕ ನೂರಾರು ಕೊರಳುಗಳು ದನಿಯೆತ್ತಿ ಮಾತನಾಡಲು ಪ್ರೇರಕಶಕ್ತಿಯಾಗಿ ನಿಂತವರು ಅವರು. ಇಂತಹವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.

ಮಾತು, ಬರವಣಿಗೆ ಎರಡರ ಮೂಲಕವೂ  ಶೋಷಿತರ ಪರ ನಿಂತವರು ಸಿದ್ಧಲಿಂಗಯ್ಯ. ಸದನದ ಒಳಗೂ ಹೊರಗೂ ಇವರ ದನಿ ಶೋಷಿ­ತರ ಪರ. ಆದರೆ ಇತ್ತೀಚೆಗೆ ‘ಮೌನವೂ ಒಂದು ಪ್ರತಿಭಟನೆ’ ಎಂದು ನಂಬಿರುವ  ಸಂದರ್ಭದಲ್ಲಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಈ ಕೆಳಗಿನ ದನಿಗಳು ಅವರಿಂದ ಮೂಡಿಬರಲು ಸಾಧ್ಯವೇ.... ಈ ಹಿನ್ನೆಲೆಯಲ್ಲಿ ಅವರಿಗೆ ಈ ಹತ್ತು ಪ್ರಶ್ನೆಗಳು.

* ದೇವನೂರ ಮಹಾದೇವ ಅವರು ಕನ್ನಡ ಮಾಧ್ಯಮದ ಅನಿ­ವಾರ್ಯ ಕುರಿತು ಚಿಂತಿಸಿ ಅಧ್ಯಕ್ಷ ಪದವಿ ನಿರಾ­ಕರಿಸಿದ್ದಾರೆ. ಕಸಾಪ ಅಧ್ಯಕ್ಷರು ಇದನ್ನು ಗಂಭೀರ­ವಾಗಿ ಪರಿಗಣಿಸಿ ಇದರ ಪರವಾಗಿ ಜನಾಂದೋ­ಲನ ರೂಪಿಸು­ತ್ತೇವೆ ಎಂದಿದ್ದಾರೆ. ಕಸಾಪ ಈ ವಿಚಾರದಲ್ಲಿ ಜನಾಂದೋಲನ ರೂಪಿಸುತ್ತದೆಂಬ ನಂಬಿಕೆ ನಿಮಗೆ ಇದೆಯೇ?

* ಅಧ್ಯಕ್ಷರು ಈ ಬಾರಿ ದಲಿತರಿಗೆ ಒತ್ತು ಕೊಡುತ್ತೇವೆ ಎಂದು ಹೇಳಿ ದಲಿತರನ್ನು ಆಯ್ಕೆ ಮಾಡಿದ್ದಾರೆ. ಇದರ ಶ್ರೇಯ ಕಸಾಪ ಅಧ್ಯಕ್ಷ­ರಿಗೋ ಅಥವಾ ಪ್ರತಿಭೆ ಉಳ್ಳ ಕವಿಗೋ?

* ದಲಿತ ಸಾಹಿತ್ಯವು ವ್ಯಕ್ತಿ ಆರಾಧನೆ­ಯನ್ನು, ಪಲ್ಲಕ್ಕಿ, ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ವಿರೋಧಿ­ಸುತ್ತಲೇ ಬಂದಿದೆ. ಸಮ್ಮೇಳನದಲ್ಲಿ ನಡೆಯುವ ಈ ತರದ ಮೆರವಣಿಗೆಗೆ ನಿಮ್ಮ ಪ್ರತಿಕ್ರಿಯೆ­ಯೇನು?

* ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿ­ರ­ಬೇಕು, ಅದಕ್ಕಾಗಿ ಹೋರಾಟ ರೂಪಿಸಬೇಕು ಎನ್ನು­ವುದು ದೇವನೂರ ಅವರ ನಿಲುವು. ಇಂತಹ ಅಭಿಪ್ರಾಯಕ್ಕೆ ನಿಮ್ಮ ನಿಲುವೇನು?

* ದಲಿತರಿಗೆ ಸರಿಯಾದ ಸ್ಥಾನಮಾನವಿಲ್ಲ ಎಂಬ ಕಾರಣದಿಂದ ಕಸಾಪಗೆ ಪರ್ಯಾಯವೆಂಬಂತೆ ದಲಿತ ಸಾಹಿತ್ಯ ಪರಿಷತ್‌ (ದಸಾಪ) ಹುಟ್ಟಿತು. ಮೊದಲು ದಸಾಪ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ನೀವು, ಈಗ ಕಸಾಪ ಸಮ್ಮೇಳನದ ಅಧ್ಯಕ್ಷರಾಗಲು ಒಪ್ಪಿದ್ದೀರಿ. ಹಾಗಾದರೆ, ಈಗ ದಲಿತರಿಗೆ ಸೂಕ್ತ  ಸ್ಥಾನಮಾನ ಸಿಕ್ಕಂತಾಗಿದೆಯೇ?

* ಕನ್ನಡದ ಬಗ್ಗೆ ಮಾತನಾಡುವವರು ಕನ್ನಡ ನಾಡು, ನುಡಿ, ಜಲ, ನೆಲದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಇಲ್ಲಿ ಕನ್ನಡ ಜನರನ್ನು ಕಡೆಗಣಿಸಲಾಗುತ್ತದೆ. ಕನ್ನಡ ಉಳಿಸುವುದೆಂದರೆ ಬರೀ ಇವುಗಳಿಗಷ್ಟೇ ಸೀಮಿತವಲ್ಲ. ಕನ್ನಡಿಗರನ್ನು ಉಳಿಸುವುದು ಕೂಡ  ಮುಖ್ಯ. ದಲಿತರು ದಿನನಿತ್ಯ ಬಹಿಷ್ಕಾರದ ನೋವು ಅನುಭವಿಸುತ್ತಿದ್ದಾರೆ. ಇದು ಕನ್ನಡಿಗರಿಂದ ಕನ್ನಡಿಗರಿಗೆ ಆಗುತ್ತಿರುವ ಅವಮಾನ. ಇದರ ವಿರುದ್ಧ ಸಮ್ಮೇಳನದ ಮೂಲಕ ನಿಮಗೆ ಧ್ವನಿ ಎತ್ತಲು ಸಾಧ್ಯವೆ?

* ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದಲ್ಲಿ ಅಸಮಾನತೆ ತಂದರೆ ಇನ್ನೊಂದು ಕಡೆ ಸರ್ಕಾರವೂ ಈ ಕೆಲಸ ಮಾಡುತ್ತಿದೆ. ಇದು ಬಡಬಗ್ಗರಿಗೆ ಮಾರಕವಾಗುತ್ತಿದೆ.  ಇಂತಹ ಮಾರಕ ನಿಲುವಿನ ವಿರುದ್ಧ ಸಮ್ಮೇಳನದಲ್ಲಿ ಧ್ವನಿ ಎತ್ತಲು ಸಾಧ್ಯವೇ?

* ವ್ಯವಸ್ಥೆಯ ಒಳಗಿದ್ದೇ ಹೋರಾಟ. ಇದು ನಿಮ್ಮ ನಿಲುವು. ಕಸಾಪದಂತಹ ಸಂಸ್ಥೆ ಇಂದಿಗೂ ಬಲಾಢ್ಯ ಜಾತಿಗಳ ಕೈಯಲ್ಲೇ ಇದೆ. ಇದರ ವಿರುದ್ಧ ಅದರೊಳಗೇ ನಿಂತು ಪ್ರತಿಭಟಿಸಲಾಗುವುದೇ?

* ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಯಾವ ಎಗ್ಗಿಲ್ಲದೆ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ದಲಿತ ಹೆಣ್ಣುಮಕ್ಕಳ ಮೇಲೆ ಯಾವುದೇ ಭಯಭೀತಿಯಿಲ್ಲದೆ ಅತ್ಯಾಚಾರಗಳು ನಡೆಯುತ್ತಿವೆ. ಹೋರಾಟದ ಹಿನ್ನೆಲೆಯಿಂದ ಬಂದ  ತಾವು ಇವುಗಳ ವಿರುದ್ಧ ಕಸಾಪವನ್ನೂ ಸೇರಿಸಿಕೊಂಡು  ಹೋರಾಟ ಕಟ್ಟಲು ಆಗುವುದೇ?

* ಕಸಾಪ, ಕನ್ನಡ ಸಾಹಿತ್ಯಕ್ಕಿಂತ ಹೆಚ್ಚಾಗಿ ಕನ್ನಡ ಜಾತ್ರೆಗೆ ಹೆಚ್ಚು ಒತ್ತು ಕೊಡುತ್ತದೆ. ಇದು ಹಲವರ ದೂರು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬೇರೆ ಯಾವ ಅಧ್ಯಕ್ಷರಿಗೂ ಕೇಳದ ಪ್ರಶ್ನೆಗಳು ಇವರಿಗ್ಯಾಕೆ? ಎಂಬ ಶಂಕೆ  ಹಲವರಲ್ಲಿ ಮೂಡಬಹುದು. ಆದರೆ ಸಿದ್ಧಲಿಂಗಯ್ಯ ಅವರು ಹೋರಾ­ಟದ ಕಾವಿನಿಂದ ಮೂಡಿಬಂದವರು. ದನಿ ಇಲ್ಲದವರಿಗೆ ದನಿಯಾದವರು. ಇವರೇ ಇಂತಹ ವಸ್ತುಸ್ಥಿತಿಗಳ ಬಗ್ಗೆ ದನಿ ಎತ್ತದಿದ್ದರೆ ಬೇರೆ ಯಾರೂ ಎತ್ತಲಾರರು. ಈ ಆಶಯದ ಹಿನ್ನೆಲೆ­ಯಲ್ಲಿ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT