ನವದೆಹಲಿ (ಪಿಟಿಐ): ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಸೇವಾ ಅವಧಿ ವಿಸ್ತರಣೆ ವಿವಾದಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ‘‘ಸ್ಪಷ್ಟ’’ ಹೇಳಿಕೆ ನೀಡಬೇಕು ಎಂದು ಸರ್ಕಾರ ಆಗ್ರಹಿಸಿದೆ.
ನ್ಯಾಯಮೂರ್ತಿಗಳ ನೇಮಕಾತಿ ಮಂಡಳಿಯು ಯುಪಿಎ ಮೊದಲ ಅವಧಿಯಲ್ಲಿ ಪ್ರಧಾನಿ ಕಚೇರಿ ಸೂಚನೆ ಮೇರೆಗೆ ಈ ನ್ಯಾಯಮೂರ್ತಿ ಅವಧಿ ವಿಸ್ತರಿಸುವುದಕ್ಕೆ ಶಿಫಾರಸು ನೀಡಿತ್ತು ಎಂದು ಕಾನೂನು ಸಚಿವ ರವಿಶಂಕರ್್ ಪ್ರಸಾದ್್ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದರು.
‘ನ್ಯಾ. ಮಾರ್ಕಂಡೇಯ ಕಟ್ಜು ಬಹಿರಂಗಪಡಿಸಿದ ಅಂಶಗಳು ಯುಪಿಎ ಅವಧಿಯಲ್ಲಿ ಸರ್ಕಾರ ಯಾವ ರೀತಿ ಕೆಲಸ ಮಾಡಿತ್ತು ಎನ್ನುವುದನ್ನು ತೋರಿಸುತ್ತದೆ. ಆಗ ಪ್ರತಿ ವಿಷಯಕ್ಕೂ ಸರ್ಕಾರ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು’ ಎಂದು ಸಂಸದೀಯ ವ್ಯವಹಾರ ಸಚಿವ ಎಂ.ವೆಂಕಯ್ಯ ನಾಯ್ಡು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಸಿಂಗ್ ಈ ಬಗ್ಗೆ ಮೌನ ತಾಳಿರುವುದನ್ನು ನೋಡಿದರೆ ಅನುಮಾನ ಬರುತ್ತದೆ. ನ್ಯಾಯಾಂಗದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಜಿ ಪ್ರಧಾನಿ ಈ ಬಗ್ಗೆ ಹೇಳಿಕೆ ನೀಡಬೇಕು. ಆಗ ನಡೆದದ್ದಾದರೂ ಏನು? ಅವರ ಮೇಲೆ ನಿಜವಾಗಿಯೂ ಒತ್ತಡ ಇತ್ತೇ? ಇತ್ಯಾದಿ ವಿಚಾರಗಳನ್ನು ಅವರು ಮುಚ್ಚುಮರೆ ಇಲ್ಲದೇ ಹೇಳಬೇಕು’ ಎಂದು ನಾಯ್ಡು ಆಗ್ರಹಿಸಿದರು. ‘ಈ ಎಲ್ಲ ಸಂಗತಿಗಳನ್ನು ತಿಳಿದುಕೊಳ್ಳುವುದು ಈ ದೇಶದ ಜನರ ಹಕ್ಕು ಕೂಡ ಹೌದು’ ಎಂದೂ ಅವರು ನುಡಿದರು.