ಸರ್ಕಾರಿ ಶಾಲೆಗಳಲ್ಲಿ 22 ಸಾವಿರ ಶಿಕ್ಷಕ ಹುದ್ದೆ ಭರ್ತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು, ಜುಲೈ ಅಂತ್ಯದೊಳಗೆ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂಬ ಶಿಕ್ಷಣ ಸಚಿವರ ಹೇಳಿಕೆ ಸ್ವಾಗತಾರ್ಹ.
ಟಿಇಟಿ ಪರೀಕ್ಷೆಯಲ್ಲಿ ಒಬ್ಬ ಶಿಕ್ಷಕನಿಗಿರಬೇಕಾದ ಎಲ್ಲ ವಿಧದ ಅರ್ಹತೆಗಳನ್ನೂ ಅಳೆಯಲಾಗುತ್ತದೆ. ಪ್ರಶಿಕ್ಷಣಾರ್ಥಿಗಳು ತಮ್ಮ ಶೈಕ್ಷಣಿಕ, ಮಾನಸಿಕ, ಬೌದ್ಧಿಕ ಮಟ್ಟ ಹಾಗೂ ಬೋಧನಾ ಕೌಶಲಗಳನ್ನು ಪರೀಕ್ಷಿಸುವಂತಹ ಪ್ರಶ್ನೆಗಳಿಗೆ ಉತ್ತರಿಸಿರುತ್ತಾರೆ. ಟಿಇಟಿ ಪಾಸಾದಂತಹ ಅಭ್ಯರ್ಥಿಗಳು ಮಾತ್ರವೇ ಸಿಇಟಿ ಪರೀಕ್ಷೆ ಬರೆಯಬೇಕೆಂಬ ನಿಯಮವಿರುವುದರಿಂದ ಈ ಅಭ್ಯರ್ಥಿಗಳು ಸುಲಭವಾಗಿ ಸಿಇಟಿ ಪರೀಕ್ಷೆಯನ್ನು ಪಾಸು ಮಾಡುತ್ತಾರೆ.
ಹೀಗಾಗಿ ಸಿಇಟಿ ಪರೀಕ್ಷೆಯನ್ನು ನಡೆಸುವುದರಿಂದ ಸಮಯ, ಹಣ ವ್ಯರ್ಥವೇ ಹೊರತು ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈಗಾಗಲೇ ಟಿಇಟಿ ಪಾಸಾದಂತಹ ಪ್ರಶಿಕ್ಷಣಾರ್ಥಿಗಳ ಅರ್ಹತಾ ಪ್ರಮಾಣಪತ್ರವನ್ನು ಕೂಡಲೇ ಬಿಡುಗಡೆ ಮಾಡಿ, ಅವರ ಹುಟ್ಟಿದ ದಿನಾಂಕ, ಪಿ.ಯು.ಸಿ/ ಪದವಿ, ಡಿ.ಇಡಿ/ಬಿ.ಇಡಿ, ಟಿಇಟಿ ಪರೀಕ್ಷೆಯಲ್ಲಿನ ಗರಿಷ್ಠ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು. ಆಗ ರಾಜ್ಯದಲ್ಲಿರುವ ಶಿಕ್ಷಕರ ಕೊರತೆಯನ್ನು ಶೀಘ್ರವಾಗಿ ನಿವಾರಿಸಬಹುದು.