ನವದೆಹಲಿ (ಪಿಟಿಐ): ‘ಸ್ವಚ್ಛ ಭಾರತ ಅಭಿಯಾನ’ ಮತ್ತು ‘ಗಂಗಾ ಶುದ್ಧೀಕರಣ ಯೋಜನೆ’ಗಳಿಗೆ ಮಾಡುವ ವೆಚ್ಚವನ್ನು ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್ಆರ್) ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.
ಕಾರ್ಪೊರೇಟ್ ವಲಯ ನೆರವು ನೀಡುತ್ತಿರುವ ಕಾರಣ ಇನ್ನು ಮುಂದೆ ಈ ಯೋಜನೆಗಳನ್ನು ಸಮಾಜ ಕಲ್ಯಾಣ ಚಟುವಟಿಕೆಗಳೆಂದು ಪರಿಗಣಿಸಲಾಗುವುದು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.
ಈ ನಿಟ್ಟಿನಲ್ಲಿ ಕಂಪೆನಿಗಳ ಕಾಯ್ದೆಗೆ ತಿದ್ದುಪಡಿ ತಂದು, ‘ಸ್ವಚ್ಛ ಭಾರತ ಕೋಶ’ ಮತ್ತು ‘ಗಂಗಾ ಶುದ್ಧೀಕರಣ ನಿಧಿ’ ಸ್ಥಾಪಿಸಲಾಗುವುದು ಎಂದಿದೆ.
ಕಾಯ್ದೆ ಅನುಸಾರ ಲಾಭದಲ್ಲಿರುವ ಕಂಪೆನಿಗಳು ತಮ್ಮ ಮೂರು ವರ್ಷಗಳ ನಿವ್ವಳ ಲಾಭದಲ್ಲಿ ಕನಿಷ್ಠ ಶೇ 2ರಷ್ಟನ್ನು ಸಿಎಸ್ಆರ್ ಚಟುವಟಿಕೆಗಳಿಗೆ ವೆಚ್ಚ ಮಾಡಬೇಕು. ಇದು ಕನಿಷ್ಠ ₨5 ಕೋಟಿ ನಿವ್ವಳ ಲಾಭ ಅಥವಾ ₨1 ಸಾವಿರ ಕೋಟಿ ವಹಿವಾಟು ಅಥವಾ ₨500 ಕೋಟಿ ಮೌಲ್ಯದ ಆಸ್ತಿ ಇರುವಂತಹ ಕಂಪೆನಿಗಳಿಗೆ ಅನ್ವಯವಾಗುತ್ತದೆ.
ಸಿಎಸ್ಆರ್ ವ್ಯಾಪ್ತಿಗೆ ಜೀವನಮಟ್ಟವನ್ನು ಮೇಲ್ದರ್ಜೆಗೆ ಏರಿಸುವಂತಹ ಚಟುವಟಿಕೆಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಬಡತನ–ಹಸಿವು– ಅಪೌಷ್ಟಿಕತೆ ನಿರ್ಮೂಲನೆ, ರಾಷ್ಟ್ರೀಯ ಪಾರಂಪರಿಕ ಸ್ಮಾರಕಗಳ ಸಂರಕ್ಷಣಾ ಕಾರ್ಯ, ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ಸಾಂಪ್ರದಾಯಿಕ ಮತ್ತು ಕರಕುಶಲ ಕಲೆಗಳಿಗೆ ಉತ್ತೇಜನ ಹಾಗೂ ಅಭಿವೃದ್ಧಿ ಮುಂತಾದ ವಿಷಯಗಳು ಸೇರಿವೆ.