ನವದೆಹಲಿ (ಪಿಟಿಐ): 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಂತರ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ಸರ್ಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು, ‘‘ಸಿಖ್ಖರಿಗೆ ಪಾಠ ಕಲಿಸುವ’’ ಉದ್ದೇಶದಿಂದಲೇ ನಿಷ್ಕ್ರಿಯವಾಗಿದ್ದರು ಎಂಬ ಸತ್ಯವನ್ನು ಸುದ್ದಿ ಅಂತರ್ಜಾಲ ತಾಣ ಕೋಬ್ರಾಪೋಸ್ಟ್ ದೃಢಪಡಿಸಿದೆ.
ಈ ಸತ್ಯವನ್ನು ಬಯಲಿಗೆಳೆಯಲು ಕೋಬ್ರಾಪೋಸ್ಟ್, ಮಾರುವೇಷದ ಕಾರ್ಯಾಚರಣೆ ನಡೆಸಿದ್ದು, ಆ ಸಂದರ್ಭದಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದವರು ನೀಡಿರುವ ಹೇಳಿಕೆಗಳನ್ನು ಪ್ರಕಟಿಸಿದೆ.
ಸಿಖ್ ವಿರೋಧಿ ಗಲಭೆಗಳಲ್ಲಿ ಭಾಗಿಯಾದ ಅಪರಾಧಿಗಳ ವಿರುದ್ಧ ತಾವು ಕ್ರಮ ಕೈಗೊಳ್ಳಲು ವಿಫಲವಾಗಿದ್ದನ್ನು ಈ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಆಗ ರಾಜಧಾನಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಗಳಾಗಿದ್ದವರೊಂದಿಗೆ ನಡೆಸಿದ ಸಂದರ್ಶನಗಳನ್ನು ಅಂತರ್ಜಾಲ ತಾಣವು ಧ್ವನಿಮುದ್ರಿಸಿಕೊಂಡಿದೆ.
ಗಲಭೆ ಸಮಯದಲ್ಲಿ ದೆಹಲಿಯಲ್ಲಿ ಪೊಲೀಸ್ ಮುಖ್ಯಸ್ಥರಾಗಿದ್ದ ಎಸ್.ಸಿ.ಟಂಡನ್ ಯಾವುದೇ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸದೆ ನುಣುಚಿಕೊಂಡರೆ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಗೌತಮ್ ಕೌಲ್ ಗಲಭೆಗಳ ಬಗ್ಗೆ ತಮಗೆ ನೇರವಾಗಿ ಮಾಹಿತಿ ಲಭ್ಯವಿತ್ತು ಎಂಬ ವರದಿಗಳನ್ನು ಬಲವಾಗಿ ಅಲ್ಲಗಳೆದರೆಂದುಕೋಬ್ರಾಪೋಸ್ಟ್ ವರದಿ ಹೇಳಿದೆ.
ಸಿಖ್ಖರನ್ನು ಗುರಿಯಾಗಿಸಿಕೊಂಡು ನಡೆದ ಗಲಭೆಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ಲಕ್ಷಿಸಿದ್ದರು. ಇದೇ ವೇಳೆ ಬೆಂಕಿ ಹಚ್ಚುವಿಕೆ, ಗಲಭೆಗಳ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದ ಮಾಹಿತಿಗಳ ಪೈಕಿ ಕೇವಲ ಶೇ 2ರಷ್ಟನ್ನು ಮಾತ್ರ ದಾಖಲಿಸಿಕೊಳ್ಳಲಾಗಿತ್ತು ಎಂಬ ಸಂಗತಿಗಳು ವರದಿಯಲ್ಲಿವೆ.
ರಾಜಕೀಯ ಸ್ವರೂಪ: 1984ರ ಸಿಖ್ ವಿರೋಧಿ ಗಲಭೆಗಳನ್ನು ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳಗಳು ಸೇರಿ ರಾಜಕೀಕರಣಗೊಳಿಸುತ್ತಿವೆ ಎಂದು ಕಾಂಗ್ರೆಸ್ ಆಪಾದಿಸಿದೆ.
ಈ ಗಲಭೆಗಳಲ್ಲಿ ಆರ್ಎಸ್ಎಸ್, ಬಿಜೆಪಿ ಮತ್ತು ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ಒಬ್ಬ ಚುನಾವಣಾ ಏಜೆಂಟ್ ಕೂಡ ಭಾಗಿಯಾಗಿದ್ದರು ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ದೂರಿದ್ದಾರೆ.