ನವದೆಹಲಿ (ಪಿಟಿಐ): ಕರ್ನಾಟಕದವರಾದ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಸುಪ್ರೀಂ ಕೋರ್ಟ್ನ 42ನೇ ಮುಖ್ಯನ್ಯಾಯಮೂರ್ತಿಯಾಗಿ ದೇವರ ಹೆಸರಿನಲ್ಲಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ದರ್ಬಾರ್ ಸಭಾಂಗಣದಲ್ಲಿ ನಡೆದ ಸರಳ ಹಾಗೂ ಸಂಕ್ಷಿಪ್ತ ಸಮಾರಂಭದಲ್ಲಿ 63 ವರ್ಷದ ನ್ಯಾ. ದತ್ತು ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ.ಕುರಿಯನ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಎಂ.ವೆಂಕಯ್ಯನಾಯ್ಡು ಹಾಗೂ ಅನಂತಕುಮಾರ್ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪರವಾಗಿ ಸಮಾರಂಭದಲ್ಲಿ ಹಾಜರಿದ್ದ ಪ್ರಮುಖರೆಂದರೆ ಅಭಿಷೇಕ್ ಮನುಸಿಂಘ್ವಿ ಹಾಗೂ ರಾಜೀವ್ ಶುಕ್ಲಾ.
ಸಿಜೆಐ ಸ್ಥಾನದಿಂದ ಶನಿವಾರವಷ್ಟೇ ನಿರ್ಗಮಿಸಿದ ನ್ಯಾ.ಆರ್.ಎಂ.ಲೋಧಾ, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳು ಸೇರಿದಂತೆ ಬಾರ್ ಕೌನ್ಸಿಲ್ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದತ್ತು ಅವರು ಮುಂದಿನ 14 ತಿಂಗಳ ಕಾಲ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದು, 2015ರ ಡಿಸೆಂಬರ್ 2ರಂದು ಅವರು ನಿವೃತ್ತಿಯಾಗಲಿದ್ದಾರೆ.
‘ನ್ಯಾಯಾಂಗ ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವ ಧೈರ್ಯ ಹಾಗೂ ವಿಶ್ವಾಸ ನನಗೆ ದೊರೆಯಲಿ ಎಂದು ಹಾರೈಸುವಂತೆ ದೇಶದ ಎಲ್ಲಾ ನಾಗರಿಕರಲ್ಲಿ ನಾನು ಮನವಿ ಮಾಡುತ್ತೇನೆ’ ಎಂದು ನೇಮಕ ಆದೇಶ ಪ್ರಕಟಗೊಂಡಾಗ ಬೆನ್ನಲ್ಲೆ ನ್ಯಾ.ದತ್ತು ಅವರು ನುಡಿದಿದ್ದರು.